ಮುಂಬೈ: ಚಿನ್ನದ ಆಭರಣಗಳ ಉದ್ಯಮಿ ನೀರವ್ ಮೋದಿಯವರೊಂದಿಗೆ ಬಿಜೆಪಿ ಸಂಪರ್ಕವನ್ನು ಹೊಂದಿತ್ತು ಎಂದು ಶಿವಸೇನೆ ಶನಿವಾರ ಆರೋಪ ಮಾಡಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ತನ್ನ ಮುಖಪುಟ ಸಾಮ್ನಾದಲ್ಲಿ ಬರೆದುಕೊಂಡಿರುವ ಶಿವಸೇನೆ ಬಿಜೆಪಿ ವಿರುದ್ಧ ಆರೋಪ ಮಾಡಿದೆ.
ದಾವೋಸ್ ನಲ್ಲಿ ಆಯೋಜನೆ ಮಾಡಲಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ರಮಗಳಲ್ಲಿ ನೀರವ್ ಮೋದಿ ಕೂಡ ಭಾಗವಹಿಸಿದ್ದರು. ನೀರವ್ ಮೋದಿ ಹಾಗೂ ಬಿಜೆಪಿ ಪಾರ್ಟ್'ನರ್ ಗಳಾಗಿದ್ದು, ಚುನಾವಣೆಗಳ ಸಂದರ್ಭದಲ್ಲಿ ಪಕ್ಷಕ್ಕೆ ನೀರವ್ ಮೋದಿ ಸಹಾಯ ಮಾಡಿದ್ದ ಎಂದು ಹೇಳಿಕೊಂಡಿದೆ.
ದೇಶದಲ್ಲಿಂದು ರೈತರು ರೂ.100ರಿಂದ ರೂ.500 ಸಾಲವನ್ನೂ ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಸಾವಿರಾರೂ ಕೋಟಿಗಳಷ್ಟು ಹೊತ್ತು ಜನರು ವಿದೇಶಗಳಿಗೆ ಪರಾರಿಯಾಗುತ್ತಿದ್ದಾರೆ.
ಎನ್'ಸಿಪಿ ಹಿರಿಯ ಮುಖಂಡ ಹಾಗೂ ಮಹಾರಾಷ್ಟ್ರ ಮಾಜಿ ಉಪ ಮುಖ್ಯಮಂತ್ರಿ ಛಗನ್ ಭುಜಬಲ್ ಹಾಗೂ ಲಾಲೂ ಪ್ರಸಾದ್ ಅವರು ಜೈಲಿನಲ್ಲಿದ್ದಾರೆ. ಆದರೆ, ಮದ್ಯದೊರೆ ವಿಜಯ್ ಮಲ್ಯ ಹಾಗೂ ನೀರವೇ ಮೋದಿಯವರು ದೇಶದ ಕೋಟಿಗಟ್ಟಲೇ ಹಣವನ್ನು ಹೊತ್ತು ಪರಾರಿಯಾಗುತ್ತಿದ್ದಾರೆಂದು ಬಿಜೆಪಿ ವಿರುದ್ಧ ಕಿಡಿಕಾರಿದೆ.