ಅಗರ್ತಲಾ: 39 ಕೆಜಿ ತೂಕದ ಚಿನ್ನದ ಬಾರ್ ಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಬಾಂಗ್ಲಾದೇಶೀ ಪ್ರಜೆಯನ್ನು ಅಗರ್ತಲಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದು ಆತನಿಂದ 1302 ಗ್ರಾಂ ತೂಕದ ಕನಿಷ್ಠ 12 ಚಿನ್ನದ ಬಾರ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ಆರೋಪಿಯಾದ ಬಾಂಗ್ಲಾ ಪ್ರಜೆಯನ್ನು ಅಬುಲ್ ಕಲಾಮ್ ಆಜಾದ್ ಎಂದು ಗುರುತಿಸಲಾಗಿದೆ.
ಅಗರ್ತಲಾ ವಿಮಾನನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ವೇಳೆಯಲ್ಲಿ ಸಿಐಎಸ್ಎಫ್ ಸಿಬ್ಬಂದಿಗಳು ಪ್ರಯಾಣಿಕನು ತನ್ನೊಡನೆ ಚಿನ್ನದ ಗಟ್ಟಿಗಳನ್ನು ಸಾಗಿಸುತ್ತಿದ್ದಾನೆ ಎನ್ನುವುದನ್ನು ಪತ್ತೆ ಮಾಡಿದೆ. ಅಗರ್ತಲಾದಿಂದ ಕೊಲ್ಕತ್ತಾಗೆ ಇಂಡಿಗೊ ವಿಮಾನದಲ್ಲಿ ಪ್ರಯಾಣ ಬೆಳೆಸಬೇಕಾಗಿದ್ದ ಅಬುಲ್ ಕಲಾಮ್ ಆಜಾದ್ ಈ ಕೃತ್ಯ ಎಸಗಿದ್ದಾನೆಂದು ಅಧಿಕಾರಿಗಳು ಹೇಳಿದ್ದಾರೆ. ಇದೇ ವೇಳೆ ಸಂಪೂರ್ಣ ತಪಾಸಣೆಗಾಗಿ ಆರೋಪಿಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ಯಲಾಯಿತು.
ಹೀಗೆ ತಪಾಸಣೆ ನಡೆಸಿದ ವೇಳೆ ಆರೋಪಿಯು ತನ್ನ ಗುದನಾಳದಲ್ಲಿ ಚಿನ್ನದ ಬಾರ್ ಗಳನ್ನು ಸಾಗಿಸುತ್ತಿದ್ದದ್ದು ಪತ್ತೆಯಾಗಿದೆ.ಇದೀಗ ಆರೋಪಿ ಹಾಗೂ ಚಿನ್ನದ ಬಾರ್ ಗಳನ್ನು ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದ್ದು ತನಿಖೆ ಮುಂದುವರಿದಿದೆ.