ದೇಶ

ಮುಖ್ಯ ಕಾರ್ಯದರ್ಶಿ ಮೇಲೆ ಹಲ್ಲೆ: ಅಧಿಕಾರಿಗಳಿಂದ ದೆಹಲಿ ಸಚಿವರಿಗೆ ಘೇರಾವ್

Lingaraj Badiger
ನವದೆಹಲಿ: ದೆಹಲಿ ಸಚಿವಾಲಯ ಅಧಿಕಾರಿಗಳು ಹಾಗೂ ಸಿಬ್ಬಂದಿ ದೆಹಲಿ ಪರಿಸರ ಸಚಿವ ಇಮ್ರಾನ್ ಹುಸೇನ್ ಅವರಿಗೆ ಸಚಿವಾಲಯದಲ್ಲೇ ಘೇರಾವ್ ಹಾಕಿದ ಘಟನೆ ಮಂಗಳವಾರ ನಡೆದಿದೆ.
ದೆಹಲಿ ಮುಖ್ಯಮಂತ್ರಿಗಳ ನಿವಾಸದಲ್ಲಿ ಆಪ್ ಕಾರ್ಯಕರ್ತರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಸಚಿವಾಲಯ ಅಧಿಕಾರಿಗಳು ಸಚಿವರಿಗೆ ಘೇರಾವ್ ಹಾಕುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೂರಾರು ಅಧಿಕಾರಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಸಚಿವರು ಆರನೇ ಮಹಡಿಯಲ್ಲಿರುವ ತಮ್ಮ ಕಚೇರಿಗೆ ತೆರಳದಂತೆ ಕೆಲಕಾಲ ತಡೆದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಭದ್ರತೆಯೊಂದಿಗೆ ಸಚಿವರನ್ನು ಅವರ ಕಚೇರಿಗೆ ಕರೆದೊಯ್ದರು ಎಂದು ಮೂಲಗಳು ತಿಳಿಸಿವೆ.
ಇನ್ನು ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಹುಸೇನ್ ಅವರು, ಅವರು ಸಚಿವಾಲಯ ನೌಕರರು ಅಥವಾ ಬೇರೆಯವರೋ ಎಂಬುದು ನನಗೆ ಗೊತ್ತಿಲ್ಲ. ಆದರೆ ಅವರನ್ನು ನಾನು ಗುರುತಿಸುತ್ತೇನೆ ಎಂದಿದ್ದಾರೆ.
ಘಟನೆಯ ನಂತರ ಸಚಿವರು ಐಪಿ ಎಸ್ಟೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ.
SCROLL FOR NEXT