ನವದೆಹಲಿ: ದೆಹಲಿ ಮುಖ್ಯ ಕಾರ್ಯದರ್ಶಿ ವಿರುದ್ಧ ಪ್ರತಿಭಟನೆಗೆ ತೊಡಗಿದ್ದ ಎಎಪಿ ಶಾಸಕ ರಾಜೇಂದ್ರ ಪಾಲ್ ಗೌತಮ್ ಅವರನ್ನು ಪೋಲೀಸರು ಬಂಧಿಸಿದ್ದಾರೆ. ರಾಜೇಂದ್ರ ಅವರು ಎಎಪಿ ಪಕ್ಷದ ಕೆಲ ಕಾರ್ಯಕರ್ತರೊಡನೆ ದೆಹಲಿ ಮುಖ್ಯ ಕಾರ್ಯದರ್ಶಿ ವಿರುದ್ಧ ದೂರು ಸಲ್ಲಿಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಮನೆಗೆ ತೆರಳುತ್ತಿದ್ದರು.
ಸೋಮವಾರ ರಾತ್ರಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮನೆಯಲ್ಲಿ ನಡೆದ ಸಭೆಯ ಬಳಿಕ ಎಎಪಿ ಶಾಸಕ ಅಜಯ್ ದತ್ ದೆಹಲಿ ಮುಖ್ಯ ಕಾರ್ಯದರ್ಶಿ ಪ್ರಕಾಶ್ ಅವರ ವಿರುದ್ಧ ಪೋಲೀಸ್ ದೂರು ದಾಖಲಿಸಿದ್ದರು.
ಮುಖ್ಯ ಕಾರ್ಯದರ್ಶಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ದೆಹಲಿ ಪೋಲೀಸರ ವಶದಲ್ಲಿರುವ ಎಎಪಿ ಶಾಸಕರಾದ ಅಮಾನತುಲ್ಲಾ ಕಾನ್ ಹಾಗೂ ಪ್ರಕಾಶ್ ಜರ್ವಾಲ್ ಅವರ ಮೇಲೆ ಪಕ್ಷಪಾತದ ವಿಚಾರಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು ಎಂದು ಪಕ್ಷದ ಮೂಲಗಳು ತಿಳಿಸಿದೆ.
ಸೆಕ್ರಟರಿಯೆಟ್ ನ ವೀಡಿಯೋ ಚಿತ್ರಗಳಲ್ಲಿ ದಾಖಲಾದಂತೆ ಪ್ರತಿಭಟನಾಕಾರರು ಎಎಪಿ ಸಚಿವರಾದ ಇಮ್ರಾನ್ ಹುಸೈನ್ ಅವರ ಮೇಲೆ ಸೆಕ್ರೆಟರಿಯಟ್ ಆವರಣದಲ್ಲಿ ಹಲ್ಲೆ ನಡೆದಲಾಗಿತ್ತು. ಅಲ್ಲದೆ ಪ್ರತಿಭಟನಾಕಾರರು ಸಚಿವರ ಆಪ್ತ ಕಾರ್ಯದರ್ಶಿ ಹಿಮಾಂಶು ಸಿಂಗ್ ಅವರ ಮೇಲೆ ಸಹ ಹಲ್ಲೆ ಮಾಡಿದ್ದಾರೆ. ಆದರೆ ಹುಸೇನ್ ಮತ್ತು ಅವರ ಕಾರ್ಯದರ್ಶಿಗಳ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಪೋಲೀಸರು ಯಾವ ಕ್ರಮವನೂ ಕೈಗೊಳ್ಳುತ್ತಿಲ್ಲ ಎಂದು ಎಎಪಿ ದೂರಿದೆ.
ಸೋಮವಾರ ರಾತ್ರಿ ದೆಹಲಿ ಮುಖ್ಯಮಂತ್ರಿಗಳ ನಿವಾಸದಲ್ಲಿ ಕರೆಯಲಾಗಿದ್ದ ತುರ್ತು ಸಭೆಯಲ್ಲಿ ತನ್ನ ಮೇಲೆ ಇಬ್ಬರು ಎಎಪಿ ಶಾಸಕರು ಹಲ್ಲೆ ನಡೆಸಿದ್ದಾರೆ ಎಂದು ದೆಹಲಿ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಆರೋಪಿಸಿದ್ದರು.