ನವದೆಹಲಿ: ವಿದ್ಯಾರ್ಥಿಗಳಿಗೆ ಒತ್ತಡ ಕಡಿಮೆಗೊಳಿಸುವ ಸಲುವಾಗಿ 2019ರಿಂದ ಅನ್ವಯವಾಗುವಂತೆ ಎನ್ ಸಿಇಆರ್ ಟಿ ಪಠ್ಯಕ್ರಮ ಅರ್ಧದಷ್ಟು ಕಡಿಮೆ ಮಾಡಲಾಗುತ್ತದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಪ್ರಸ್ತುತ ಎನ್ ಸಿಇಆರ್ ಟಿ ಪಠ್ಯಕ್ರಮವು ಬಿಎ, ಬಿಕಾಂ ಪದವಿ ಪಠ್ಯಕ್ರಮಕ್ಕಿಂತಲೂ ಹೆಚ್ಚಿದ್ದು ಇದು ಅರ್ಧದಷ್ಟು ಇಳಿಯುವುದರಿಂದ ವಿದ್ಯಾರ್ಥಿಗಳು ತಮ್ಮ ಸರ್ವತೋಮುಖ ಬೆಳವಣಿಗೆಗಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳ ಕೌಶಲ್ಯ ಬೆಳವಣಿಗೆ ಹಂತದಲ್ಲಿ ಅವರಿಗೆ ಸಂಪೂರ್ಣ ಸ್ವಾತಂತ್ರ ನೀಡಬೇಕಾದದ್ದು ಅಗತ್ಯ. ನಾನು ಪಠ್ಯಕ್ರಮವನ್ನು ಅರ್ಧದಷ್ಟು ತಗ್ಗಿಸಲು ಎನ್ ಸಿಇಆರ್ ಟಿ ಗೆ ಮನವಿ ಮಾಡಿದ್ದೇನೆ. ಇದು 2019ರ ಶೈಕ್ಷಣಿಕ ವರ್ಷದಿಂಡ ಅನ್ವಯವಾಗಲಿದೆ ಎಂದು ಸಚಿವರು ರಾಜ್ಯಸಭಾ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಬಜೆಟ್ ಅಧಿವೇಶನದ ಮುಂದಿನ ಭಾಗದಲ್ಲಿ ಈ ಸಂಬಂಧ ಒಂದು ಮಸೂದೆಯನ್ನು ರೂಪಿಸಿ ಮಂಡನೆ ಮಾಡಲಾಗುತ್ತದೆ. ಪರೀಕ್ಷೆ ಎನ್ನುವುದಿಲ್ಲದೆ ಹೋದಲ್ಲಿ ಯಾವ ಸ್ಪರ್ಧೆಯಾಗಲಿ, ಗುರಿಯಾಗಲಿ ಇರುವುದಿಲ್ಲ. ಉತ್ತಮ ಫಲಿತಾಂಶಕ್ಕಾಗಿ ಸ್ಪರ್ಧೆ ಅತ್ಯಂತ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಮಾರ್ಚ್ ನಲ್ಲಿ ಪರೀಕ್ಷೆ ತೇರ್ಗಡೆಯಾಗಲು ಸಾಧ್ಯವಾಗದವರಿಗೆ ಮೇ ನಲ್ಲಿ ಇನ್ನೊಂದು ಅವಕಾಶವಿರಲಿದೆ. ಎರಡೂ ಬಾರಿ ತೇರ್ಗಡೆ ಹೊಂಡಲು ವಿಫಲರಾದವರಿಗೆ ಮಾತ್ರ ಸಂಕಷ್ಟ ಎದುರಾಗಲಿದೆ. ಶಿಕ್ಷಕರ ಕಳೆಪೆ ಗುಣಮಟ್ಟದ ಬೋಧನೆಯಿಂದಾಗಿ ಕಳಪೆ ಫಲಿತಾಂಶಗಳು ಬರುತ್ತಿದೆ ಎಂದ ಜಾವಡೇಕರ್ ವಿದ್ಯಾರ್ಥಿಗಳ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ನಿರ್ಣಯ ಮಾಡಿ ಅದಕ್ಕೆ ಅನುಗುಣವಾಗಿ ಅವರಿಗೆ ಮಾರ್ಗದರ್ಶನ ನೀಡಬೇಕಾದದ್ದು ಶಿಕ್ಷಕರ ಮೂಲಭೂತ ಕಾರ್ಯ ಎಂದಿದ್ದಾರೆ.
ಆರ್ ಟಿಎ ಕಾಯ್ದೆಯ ಅನುಸಾರ 2015ರಿಂದ ಒಟ್ಟು 20 ಲಕ್ಷ ಶಿಕ್ಷಕರು ತರಬೇತಿ ಪಡೆದಿದ್ದಾರೆ. ಆದರೆ ಇದರಲ್ಲಿ ಐದು ಲಕ್ಷ ಶಿಕ್ಷಕರು ಮಾತ್ರ ತರಬೇತಿ ಪೂರ್ಣಗೊಳಿಸಿದ್ದಾರೆ. ಇನ್ನು ಸುಮಾರು 14 ಲಕ್ಷಕ್ಕೂ ಅಧಿಕ ಶಿಕ್ಷಕರು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ತರಬೇತಿ ಹೊಂದುತ್ತಿದ್ದಾರೆ ಇದು ಮುಂಬರುವ ದಿನಗಳಲ್ಲಿ ಉತ್ತಮ ಫಲಿತಾಂಶಗಳಿಗೆ ಕಾರಣವಾಗಬೇಕಿದೆ ಎಂದು ಸಚಿವರು ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos