ದೇಶ

ಮಹಾತ್ಮ ಗಾಂಧಿ ಹತ್ಯೆ ಪ್ರಕರಣದ ಮರು ತನಿಖೆಯ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್

Srinivasamurthy VN
ನವದೆಹಲಿ: ಸ್ವತಂತ್ರ್ಯ ಹೋರಾಟಗಾರ ಮಹಾತ್ಮಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮರು ತನಿಖೆಯ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಬಗ್ಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಸರಣ್ ಅವರು ಸೋಮವಾರ ಸುಪ್ರೀಂ ಕೋರ್ಟ್ ಗೆ ತಮ್ಮ ವರದಿ ಸಲ್ಲಿಕೆ ಮಾಡಿದ್ದರು. ವರದಿ ಸ್ವೀಕರಿಸಿ ಅದನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ ಇದೀಗ ಪ್ರಕರಣದ ಮರು ತನಿಖೆಯ  ಅಗತ್ಯವಿಲ್ಲ ಎಂದು ಹೇಳಿದೆ. ಗಾಂಧಿ ಹತ್ಯೆಗೆ ನಾಥೂರಾಮ್ ವಿನಾಯಕ್ ಗೋಡ್ಸೆಯೇ ಕಾರಣ ಎಂದು ಈಗಾಗಲೇ ಸ್ಪಷ್ಟವಾಗಿದೆ. ಆತನ ಸ್ವತಃ ಗಾಂಧಿಯನ್ನು ತಾನೇಕೆ ಕೊಂದೆ ಎಂದು ಹೇಳಿಕೊಂಡಿದ್ದಾನೆ. ಹೀಗಿರುವಾಗ  ಪ್ರಕರಣದ ಮರುತನಿಖೆಯ ಅಗತ್ಯವೇನು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಇನ್ನು ಮಹಾತ್ಮಗಾಂಧಿ ಹತ್ಯೆ ಪ್ರಕರಣದ ಮರು ತನಿಖೆ ಸಂಬಂಧ ಹಿರಿಯ ಅಡ್ವೋಕೇಟ್ ಅಮರೇಂದ್ರ ಶರಣ್ ಅವರನ್ನು ಆ್ಯಮಿಕಸ್ ಕ್ಯೂರಿಯಾಗಿ ನೇಮಕ ಮಾಡಿದ್ದ ಸುಪ್ರೀಂ ಕೋರ್ಟ್ ವರದಿ ನೀಡುವಂತೆ ಕೇಳಿತ್ತು. ಅದರಂತೆ  ನಿನ್ನೆ ಆ್ಯಮಿಕಸ್ ಕ್ಯೂರಿ ಕೂಡ ಆಗಿರುವ ಸರಣ್ ಅವರು ಸುಪ್ರೀಂ ಕೋರ್ಟ್ ಗೆ ತಮ್ಮ ವರದಿ ನೀಡಿದ್ದಾರೆ. ವರದಿಯಲ್ಲಿ ಗಾಂಧಿ ಹತ್ಯೆಯಲ್ಲಿ ಬ್ರಿಟೀಷ್ ಗುಪ್ತಚರ ಇಲಾಖೆಯ 'ಫೋರ್ಸ್ 136' ಘಟಕದ ಕೈವಾಡದ ಕುರಿತು ಯಾವುದೇ  ಮಹತ್ವದ ಸಾಕ್ಷ್ಯಾಧಾರ ಲಭ್ಯವಾಗಿಲ್ಲ. ಹೀಗಾಗಿ ಪ್ರಕರಣದ ಮರುತನಿಖೆಯ ಅಗತ್ಯವಿಲ್ಲ ಎಂದು ಹೇಳಲಾಗಿತ್ತು.
ಇದೇ ವರದಿಯನ್ನಾಧರಿಸಿ ಸುಪ್ರೀಂ ಕೋರ್ಟ್ ಇದೀಗ ತನ್ನ ತೀರ್ಮಾನ ಘೋಷಣೆ ಮಾಡಿದ್ದು, ಗಾಂಧಿ ಹತ್ಯೆ ಪ್ರಕರಣದ ಮರುತನಿಖೆಯ ಅಗತ್ಯವಿಲ್ಲ ಎಂದು ಹೇಳಿದೆ. ಈ ಹಿಂದೆ ಮುಂಬೈ ಮೂಲದ ಐಟಿ ಕನ್ಸಲ್ ಟೆಂಟ್ ಪಂಕಜ್  ಕುಮುಚಂದ್ರ ಫಡ್ನಿಸ್ ಹೈಕೋರ್ಟ್ ನಲ್ಲಿ ಮಹಾತ್ಮಗಾಂಧಿ ಹತ್ಯೆ ಪ್ರಕರಣದ ಮರು ತನಿಖೆ ನಡೆಸುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ಗಾಂಧಿ ಹತ್ಯೆ ಹಿಂದೆ ಬ್ರಿಟೀಷ್ ಗುಪ್ತಚರ ಸಂಸ್ಥೆಯ ಕೈವಾಡವಿದ್ದು, ತನ್ನ  ಫೋರ್ಸ್ 136 ಘಚಕದ ಮೂಲಕ ಷಡ್ಯಂತ್ರ ರಚಿಸಿ ಗಾಂಧಿ ಅವರನ್ನು ಹತ್ಯೆ ಮಾಡಿಸಿತ್ತು ಎಂದು ಆರೋಪಿಸಿದ್ದರು. ಆದರೆ ಫಡ್ನಿಸ್ ಅವರ ಅರ್ಜಿಯನ್ನು ಹೈಕೋರ್ಟ್ ತಳ್ಳಿಹಾಕಿತ್ತು. 
ಬಳಿಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಫಡ್ನಿಸ್ ಪ್ರಕರಣ ಮರು ವಿಚಾರಣೆಗೆ ಪಿಐಎಲ್ ಸಲ್ಲಿಸಿ ಮನವಿ ಮಾಡಿಕೊಂಡಿದ್ದರು. ಅರ್ಜಿ ಸ್ವೀಕರಿಸಿದ್ದ ಸುಪ್ರೀಂ ಕೋರ್ಟ್ ಅರ್ಜಿಯನ್ನು ವಿಚಾರಣೆಗೆ ಪಡೆಯಬೇಕೇ ಅಥವಾ ಇಲ್ಲವೇ ಎಂಬ  ನಿರ್ಧಾರದ ಸಂಬಂಧ ಕೋರ್ಟ್ ಗೆ ಸಲಹೆ ನೀಡುವಂತೆ ನಿವೃತ್ತ ಸಾಲಿಸಿಟರ್ ಜನರಲ್ ಸರಣ್ ಅವರಿಗೆ ಸೂಚಿಸಿತ್ತು. ಅಲ್ಲದೆ ಪ್ರಕರಣದಲ್ಲಿ ಆ್ಯಮಿಕಸ್ ಕ್ಯೂರಿ ಆಗಿ ಕಾರ್ಯ ನಿರ್ವಹಣೆ ಮಾಡುವಂತೆ ಕೇಳಿತ್ತು.
SCROLL FOR NEXT