ದೇಶ

ಕನ್ನಡಿಗರು ಹರಾಮಿಗಳು ಎಂದು ಗೋವಾ ನೀರಾವರಿ ಸಚಿವ ವಿನೋದ ಪಾಲೇಕರ್ ಟ್ವೀಟ್, ವ್ಯಾಪಕ ಆಕ್ರೋಶ

Vishwanath S
ಪಣಜಿ: ಕನ್ನಡಿಗರು ಹರಾಮಿಗಳು ಎಂದು ಟ್ವೀಟ್ ಮಾಡುವ ಮೂಲಕ ಗೋವಾ ನೀರಾವರಿ ಸಚಿವ ವಿನೋದ ಪಾಲೇಕರ್ ಇದೀಗ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. 
ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಇರುವ ಕಳಸಾ ನಾಲಾ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಪಾಲೇಕರ್ ಕರ್ನಾಟಕ ಮಹದಾಯಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಕನ್ನಡಿಗರು ಹರಾಮಿಗಳು ಎಂದು ಟ್ವೀಟ್ ಮಾಡಿದ್ದರು. 
ಈ ವೇಳೆ ಮಹದಾಯಿ ನಮ್ಮ ತಾಯಿ ಇದ್ದಂತೆ. ಈ ವಿಷಯದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. ನ್ಯಾಯಾಲಯ ಆದೇಶ ಬರುವವರೆಗೆ ಅದನ್ನು ಬಿಟ್ಟುಕೊಡುವುದಿಲ್ಲ. ಕರ್ನಾಟಕದಲ್ಲಿ ರೈತರು ಪ್ರತಿಭಟನೆ ನಡೆಸಿದರೇ ಅದು ನಮಗೆ ಸಂಬಂಧಿಸಿದ್ದಲ್ಲ. ಮಹದಾಯಿ ವಿವಾದ ಪ್ರಕರಣ ನ್ಯಾಯಧೀಕರಣದಲ್ಲಿ ಇತ್ಯರ್ಥವಾಗುವವರೆಗೆ ನೀರು ಕೊಡುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದ್ದರು. 
ವಿನೋದ ಪಾಲೇಕರ್ ಟ್ವೀಟ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದು ಮಹದಾಯಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ. 
ಇನ್ನು ಕನ್ನಡಿಗರು ಹರಾಮಿ ಎಂದು ಕರೆದಿರುವುದಕ್ಕೆ ಕನ್ನಡಪರ ಹೋರಾಟಗಾರರು, ಮಹದಾಯಿ ಹೋರಾಟಗಾರರು ವಿನೋದ ಪಾಲೇಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಪಾಲೇಕರ್ ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.  
SCROLL FOR NEXT