ಬಾರ್ಮರ್: ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯ ಧಾಟಿಯಲ್ಲಿ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಪಕ್ಷ ಹಾಗೂ ಬರ ಎರಡೂ ಅವಳಿ ಸಹೋದರರಿದ್ದಂತೆ, ಕಾಂಗ್ರೆಸ್ ಹೋದಲ್ಲೆಲ್ಲಾ ಬರವೂ ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ.
ರಾಜಸ್ತಾನದ ಬಾರ್ಮರ್ ನಲ್ಲಿ ತೈಲ ಸಂಸ್ಕರಣಾಗಾರ ಉದ್ಘಾಟನೆ ಮಾಡಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಕೆಲವರು ಬಾರ್ಮರ್ ಸಂಸ್ಕರಣಾಗಾರದ ಬಗ್ಗೆ ಜನರನ್ನು ದಾರಿ ತಪ್ಪಿಸಿದ್ದರು, ಅಂತಹವರು ದೇಶವನ್ನು ವರ್ಷಗಳ ಕಾಲ ವಿವಿಧ ವಿಷಯಗಳಲ್ಲಿ ದಾರಿ ತಪ್ಪಿಸಿದ್ದಾರೆ.
ಇದೇ ವೇಳೆ ಒಆರ್ ಒಪಿ ಬಗ್ಗೆಯೂ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷ 40 ವರ್ಷಗಳಲ್ಲಿ ಒಆರ್ ಒಪಿಗೆ ಸಂಬಂಧಿಸಿದಂತೆ ಏನನ್ನೂ ಮಾಡಲಿಲ್ಲ,. 2014 ರ ಚುನಾವಣೆಗೂ ಮುನ್ನ ಹಣ ಬಿಡುಗಡೆ ಮಾಡಿದ್ದರು, ಆ ಮೊತ್ತ ಅಧಿಕೃತ ಪಿಂಚಣಿ ಪಡೆಯುವವರ ಅಂಕಿ-ಅಂಶಗಳಿಗೆ ಸರಿ ಹೊಂದುವುದಿಲ್ಲ ಎಂದು ತಿಳಿದಿದ್ದರೂ ಕಾಟಾಚಾರಕ್ಕೆ ಹಣ ಬಿಡುಗಡೆ ಮಾಡಿದ್ದರು, ಆದರೆ ಒಆರ್ ಒಪಿಗೆ ಬದ್ಧತೆ ತೋರಿ ಅದನ್ನು ನಿಜ ಮಾಡಿದ್ದು ನಾವು ಎಂದು ಮೋದಿ ಹೇಳಿದ್ದಾರೆ.
ಕೇವಲ ಚಪ್ಪಾಳೆಗಳಿಗಾಗಿ ಕೆಲವರು ಈಡೇರಿಸಲಾಗದ ಭರವಸೆಗಳನ್ನು ನೀಡಿದ್ದರು, ಈ ಮೂಲಕ ಜನರನ್ನು ದಾರಿ ತಪ್ಪಿಸುವ ಸಂಸ್ಕೃತಿಯನ್ನೇ ಸೃಷ್ಟಿಸಿದ್ದರು. ರಾಜಸ್ಥಾನದಲ್ಲಿ ಸಿಎಂ ವಸುಂಧರಾ ರಾಜೆ ಅವರ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಬರ ನಿರ್ವಹಣೆ ಮಾಡಿರುವ ರೀತಿ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.