ನವದೆಹಲಿ: ಮಾತನಾಡುವ ಗೊಂಬೆ ಖ್ಯಾತಿಯ ಡಿಂಕು ಇಂದುಶ್ರೀ ಸೇರಿದಂತೆ ವಿಧ ಕ್ಷೇತ್ರಗಳಲ್ಲಿ ಪ್ರಥಮಗಳ ಸಾಧನೆ ಮಾಡಿದ 112 ಮಹಿಳೆಯರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸನ್ಮಾನಿಸಿದ್ದಾರೆ.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯ ವತಿಯಿಂದ ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ರಾಷ್ಟ್ರಪತಿ ಕೋವಿಂದ್ ಈ ಗೌರವ ಸಮರ್ಪಣೆ ಮಾಡಿದರು.
ನಿನ್ನೆ (ಶನಿವಾರ) ಸಂಜೆ ರಾಷ್ಟ್ರಪತಿ ಭವನದಲ್ಲಿ ಈ ಸನ್ಮಾನ ಸಮಾರಂಭ ನಡೆದಿದ್ದು ಡಿಂಕು ಇಂದುಶ್ರೀಯೊಡನೆ ಚೆನ್ನೈನ ಮೊದಲ ಅಂಧ ಐಎಫ್ಎಸ್ ಅಧಿಕಾರಿ ಬೆನೊ ಝೆಫೈನ್, ಅಂಧ ಲೆಕ್ಕಪರಿಶೋಧಕಿ ರಜನಿ ಗೋಪಾಲಕೃಷ್ಣನ್ ಪಿಟಿ ಉಷಾ, ಪಿವಿ ಸಿಂಧು, ಸಾನಿಯಾ ಮಿರ್ಜಾ, ಐಶ್ವರ್ಯಾ ರೈ, ಕಿರಣ್ ಮಜುಮ್ದಾರ್ ಷಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಗಿದೆ.
ಡಿಂಕು ಇಂದುಶ್ರೀ ಎಂದೇ ಖ್ಯಾತರಾಗಿರುವ ಇಂದುಶ್ರೀ ಇಂದು ವಿವಿಧ ದೇಶಗಳಲ್ಲಿ ಸಾವಿರಾರು ಕಾರ್ಯಕ್ರಮಗಳನ್ನು ನೀಡುವ ಮೂಲಕ ವಿಶ್ವ ಖ್ಯಾತಿ ಗಳಿಸಿದ್ದಾರೆ. ಇವರು ಇತ್ತೀಚೆಗೆ ಸಿಎನ್ಎನ್ ಚಾನೆಲ್ ನಲ್ಲಿ ಒಂದು ಕಾರ್ಯಕ್ರಮ ನೀಡುವ ಮೂಲಕ ಗಮನ ಸೇಳೆದಿದ್ದರು.