ನವದೆಹಲಿ: ನಮ್ಮ ನೆಲದಲ್ಲಿ ಮಾತ್ರವಲ್ಲದೆ ಅಗತ್ಯವಿದ್ದಲ್ಲಿ ವಿದೇಶಿ ನೆಲದಲ್ಲಿ ನಿಂತು ಸಹ ವೈರಿಗಳ ಮೇಲೆ ದಾಳಿ ನಡೆಸುವುದಕ್ಕೆ ನಾವು ಹಿಂಜರಿಯುವುದಿಲ್ಲ ಎಂದು ಭಾರತ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಭಾರತೀಯ ಸೇನೆ ಕಾಶ್ಮೀರ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಮೂವರು ಪಾಕಿಸ್ತಾನ ಸೈನಿಕರು ಹಾಗೂ ಅವರದ್ದೊಂದು ಸೇನಾ ನೆಲೆಯನ್ನು ದ್ವಂಸಗೊಳಿಸಿದ್ದ ಒಂದು ತಿಂಗಳ ಬಳಿಕ ರಾಜನಾಥ್ ಈ ಹೇಳಿಕೆ ನೀಡಿದ್ದಾರೆ.
"ಕೆಲವು ತಿಂಗಳುಗಳ ಹಿಂದೆ, ಪಾಕಿಸ್ತಾನ ನಡೆಸಿದ್ದ ಹೇಡಿತನದ ಕೃತ್ಯದಲ್ಲಿ ನಮ್ಮ 17ಯೋಧರು ಹುತಾತ್ಮರಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಈ ಗಂಭೀರ ವಿಚಾರದ ಬಗ್ಗೆ ಸಮಾಲೋಚನೆ ನಡೆಸಿ ಭಾರತೀಯ ಸೇನೆಯು ಪಾಕಿಸ್ತಾನಿ ನೆಲವನ್ನು ಪ್ರವೇಶಿಸಿ ಉಗ್ರಗಾಮಿಗಳನ್ನು ಕೊಲ್ಲಲು ಅಪ್ಪಣೆ ನೀಡಿದ್ದರು. ಜಾಗತಿಕ ವಲಯದಲ್ಲಿ ಭಾರತ ಒಂದು ಪ್ರಬಲ ರಾಷ್ಟ್ರವಾಗಿ ಮಾರ್ಪಟ್ಟಿದೆ ಮತ್ತು ನಾವು ನಮ್ಮ ಶತ್ರುಗಳ ಮೇಲೆ ನಮ್ಮ ನೆಲದಲ್ಲಷ್ಟೇ ಅಲ್ಲ, ಅವರ ದೇಶಕ್ಕೆ ನುಗ್ಗಿಯೂ ಆಕ್ರಮಣ ಮಾಡುವ ಮೂಲಕ ನಾವು ಜಗತ್ತಿಗೆ ಬಲವಾದ ಸಂದೇಶವನ್ನು ನೀಡಿದ್ದೇವೆ." ಸಿಂಗ್ ಹೇಳಿದ್ದಾರೆ.
"ಭಾರತವು ಪಾಕಿಸ್ತಾನದೊಡನೆ ಉತ್ತಮ ಸ್ನೇಹ ಬಯಸುತ್ತದೆ, ಆದರೆ ಪಾಕಿಸ್ತಾನ ಅದಕ್ಕೆ ಪೂರಕ ಅಭಿಪ್ರಾಯವನ್ನು ಹೊಂದಿಲ್ಲ. ನಮ್ಮ ಸರ್ಕಾರ ರಾಷ್ಟ್ರ ಗೌರವವನ್ನು ಹಾಲು ಮಾಡುವ ಯಾವ ತೀರ್ಮಾನವನ್ನೂ ತೆಗೆದುಕೊಳ್ಳುವುದಿಲ್ಲ ಎಂದು ಣಾನು ಭರವಸೆ ನೀಡುತ್ತೇನೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ನಮ್ಮ ಆರ್ಥಿಕತೆ ಉತ್ಕೃಷ್ಠ ಬೆಳವಣಿಗೆ ಸಾಧಿಸಿದೆ. ಇದನ್ನು ಜಾಗತಿಕ ಆರ್ಥಿಕ ತಜ್ಞರು ಸಹ ಒಪ್ಪಿಕೊಂಡಿದ್ದಾರೆ." ರೈಲ್ವೆ ಮಾಲ್ ಗೋದಾಮ್ ಶ್ರಮಿಕ ಸಂಘದ ಸಭೆಯನ್ನು ಉದ್ದೇಶಿಸಿ ರಾಜನಾಥ್ ಸಿಂಗ್ ಮಾತನಾಡಿದರು.
ರೈಲ್ವೆ ಕಾರ್ಮಿಕರ ಸಮಸ್ಯೆಗಳನ್ನು ಅವರು ತಮ್ಮ ಅಧಿಕಾರಿಗಳು ಮತ್ತು ರೈಲ್ವೆ ಮಂತ್ರಿಗಳೊಂದಿಗೆ ಚರ್ಚಿಸುತ್ತೇನೆಂದು ಅವರು ಭರವಸೆ ನೀಡಿದ್ದಾರೆ.