ದೇಶ

ಪದ್ಮಾವತ್ ವಿವಾದ: ಶಾಲೆಯಲ್ಲಿ ಘೂಮರ್ ಹಾಡಿನ ನೃತ್ಯಕ್ಕೆ ರಾಜಸ್ಥಾನ ಸರ್ಕಾರ ನಿಷೇಧ

Lingaraj Badiger
ಜೈಪುರ: ದೇಶಾದ್ಯಂತ ಭಾರಿ ಸದ್ದು ಮಾಡುತ್ತಿರುವ ವಿವಾದಾತ್ಮಕ ಬಾಲಿವುಡ್ ಚಿತ್ರ 'ಪದ್ಮಾವತ್' ನ ಘೂಮರ್ ಹಾಡಿಗೆ ಗಣರಾಜ್ಯೋತ್ಸವ ವೇಳೆ ಶಾಲೆಯಲ್ಲಿ ನೃತ್ಯ ಮಾಡದಂತೆ ರಾಜಸ್ಥಾನ ಸರ್ಕಾರ ಗುರುವಾರ ನಿಷೇಧ ಹೇರಿದೆ.
ಗಣರಾಜ್ಯೋತ್ಸವ ಆಚರಣೆ ವೇಳೆ ಪದ್ಮಾವತ್ ಚಿತ್ರದ ಹಾಡಿನ ನೃತ್ಯ ಪ್ರದರ್ಶನ ಮಾಡದಂತೆ ರಾಜಸ್ಥಾನ ಸರ್ಕಾರ ಎಲ್ಲಾ ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಆದೇಶಿಸಿದೆ.
ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ ವೇಳೆ ವಿವಾದಾತ್ಮಕ ಚಿತ್ರದ ಹಾಡಿಗೆ ನೃತ್ಯ ಪ್ರದರ್ಶನ ಮಾಡದಂತೆ ಉದಯಪುರ್ ಹೆಚ್ಚುವರಿ ಜಿಲ್ಲಾಧಿಕಾರಿ ಸುಭಾಶ್ ಚಂದ್ ಶರ್ಮಾ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ಗಣರಾಜ್ಯೋತ್ಸವ ಆಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗಣರಾಜ್ಯೋತ್ಸವವನ್ನು ಶಾಂತಿಯುತವಾಗಿ ಆಚರಿಸಬೇಕು ಎಂಬುದು ನಮ್ಮ ಉದ್ದೇಶ ಎಂದು ಉದಯಪುರ್ ಜಿಲ್ಲಾಧಿಕಾರಿ ಬಿಶ್ನು ಚರಣ್ ಮಲಿಕ್ ಅವರು ಹೇಳಿದ್ದಾರೆ.
ಗಣರಾಜ್ಯೋತ್ಸವ ಆಚರಣೆ ವೇಳೆ ಪದ್ಮಾವತ್ ಚಿತ್ರದ ಘೂಮರ್ ಹಾಡಿಗೆ ನೃತ್ಯ ಪ್ರದರ್ಶನ ನೀಡದಂತೆ ತಡೆಯಬೇಕು ಎಂದು ಶ್ರೀ ರಾಷ್ಟ್ರೀಯ ಕರ್ಣಿ ಸೇನೆ ಮನವಿ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ.
ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತ್ ಚಿತ್ರ ಇಂದು ದೇಶಾದ್ಯಂತ ತೆರೆ ಬಿಡುಗಡೆಯಾಗಿದೆ.
SCROLL FOR NEXT