ನವದೆಹಲಿ: ಕೇಂದ್ರ ಕಾರ್ಮಿಕ ಸಚಿವಾಲಯ ವೆಬ್ ಸೈಟ್ ನಲ್ಲಿ ಕಟ್ಟಡ ನಿರ್ಮಾಣ ಕಾರ್ಯಕರ್ತರಿಗೆ ಕಲ್ಯಾಣ ಯೋಜನೆಯ ಕುರಿತಂತೆ ಅಪ್ ಲೋಡ್ ಮಾಡಿರುವ ಸಂದೇಶ "ಒಂದು ಸುಳ್ಳಿನ ಕಂತೆ", ಬಡ ಕಾರ್ಮಿಕರಿಗೆ 30 ಸಾವಿರ ಕೋಟಿ ರೂ. ಮೊತ್ತದ ಯೋಜನೆಯನ್ನು ಒಳಗೊಂಡಿದೆ ಎನ್ನುವುದು "ಜೋಕ್" ಎನ್ನುವುದಾಗಿ ಹೇಳಿರುವ ಸುಪ್ರೀಂ ಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
"ನೀವು ಜೋಕ್ ಮಾಡುತ್ತಿದ್ದೀರಿ, ಬಡ ಕಾರ್ಮಿಕರಿಗಾಗಿ 30,000 ಕೋಟಿ ಯೋಜನೆ? ಯಾರು ಬಡವರಾಗಿದ್ದಾರೆ? ಅಲ್ಲದೆ ಬಡವರಿಗೆ ನೀವು ತೋರುತ್ತಿರುವ ಸಹಾನುಭೂತಿ ಅದು ನಿಜವಾದ ಸಹಾನುಭೂತಿಯೆ? ಎಂದು ಪ್ರಶ್ನಿಸಿರುವ ಉನ್ನತ ನ್ಯಾಯಾಲಯ ತಾನು ನೀಡಿದ ಆದೇಶವನ್ನು ಏಕೆ ಪಾಲಿಸಲಿಲ್ಲ ಎಂದು ಕೇಂದ್ರ ಕಾರ್ಮಿಕ ಇಲಾಖೆ ಕಾರ್ಯದರ್ಶಿಯವರಿಗೆ ವಿವರಣೆ ಕೇಳಿದೆ.
ನ್ಯಾಯಾಧೀಶರಾದ ಮದನ್ ಬಿ ಲೋಕೂರ್ ಮತ್ತು ದೀಪಕ್ ಗುಪ್ತಾ ಅವರನ್ನೊಳಗೊಂಡ ಪೀಠವು ಕಟ್ಟಡ ನಿರ್ಮಾಣ ಕೆಲಸಗಾರರ ಕಲ್ಯಾಣಕ್ಕಾಗಿ 30,000 ಕೋಟಿ ರೂಪಾಯಿಗಳನ್ನು ಒದಗಿಸಿರುವ ಬಗೆಗೆ ವಿವರಣೆ ಒದಗಿಸುವಂತೆ ನಿರ್ದೇಶನ ನೀಡಿದೆ.
ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಸಲ್ಲಿಸಿದ ಅಫಿಡವಿಟ್ ವಿಚಾರಣೆ ನಡೆಸಿದ ನ್ಯಾಯಾಲಯ ಕೇಂದ್ರದ ವಿರುದ್ಧ ಟೀಕಾ ಪ್ರಹಾರ ನಡೆಸಿದೆ. ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಾಗಿದ್ದ ನಿಧಿಯಲ್ಲಿ ಕೇವಲ ಶೇ.10ರಷ್ಟನ್ನು ಮಾತ್ರವೇ ನೈಜ ಉದ್ದೇಶಕ್ಕಾಗಿ ಬಳಸಲಾಗಿದೆ, ಉಳಿದ ಹಣವನ್ನು ಲ್ಯಾಪ್ ಟಾಪ್ ಹಾಗೂ ವಾಷಿಂಗ್ ಮೆಷಿನ್ ಖರೀದಿಸಲು ಬಳಕೆ ಮಾಡಲಾಗಿದೆ ಎಂದು ಅಫಿಡವಿಟ್ ನಲ್ಲಿ ದೂರಲಾಗಿತ್ತು.
ಶಿಕ್ಷಣ, ಆರೋಗ್ಯ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಚಾರಗಳಿಗೆ ಸಂಬಂಧಿಸಿದಂತೆ ಸಪ್ಟೆಂಬರ್ 30 ರೊಳಗೆ ದೇಶಾದ್ಯಂತದ ಕಟ್ಟ್ಡ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕಾಗಿ ಮಾದರಿ ಯೋಜನೆಯನ್ನು ರೂಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಅಫಿಡವಿಟ್ ನಲ್ಲಿ ಮನವಿ ಮಾಡಲಾಗಿದೆ.
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಯಕರ್ತರು (ಉದ್ಯೋಗ ಮತ್ತು ಪರಿಸ್ಥಿತಿಗಳ ನಿಯಂತ್ರಣ) ಕಾಯಿದೆ, 1996 (BOCW ಆಕ್ಟ್) ಮತ್ತು ಕಟ್ಟಡ ಮತ್ತು ಇತರ ನಿರ್ಮಾಣ ಕೆಲಸಗಾರರ ಕಲ್ಯಾಣ ಸೆಸ್ ಆಕ್ಟ್, 1996, ಎರಡು ಕಾನೂನುಗಳ ಅನುಷ್ಠಾನಕ್ಕೆ ಸಂಬಂಧಪಟ್ಟ ವಿಷಯವನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos