ನವದೆಹಲಿ: ಭಾರತದಂತಹ ಸೆಕ್ಯುಲರ್ ರಾಷ್ಟ್ರಗಳಲ್ಲಿ ಸರ್ಕಾರಕ್ಕೆ ಸಂಬಂಧಪಟ್ಟ ಜಾಗಗಳಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸುವುದಕ್ಕೆ ಅನುಮತಿ ಇದೆಯೇ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ದೆಹಲಿಯ ನೈಋತ್ಯ ಭಾಗದಲ್ಲಿ ಪಾರ್ಕ್ ನಲ್ಲಿ ಜಾಗರಣೆ ಹಾಗೂ ಮಾತಾ ಕಿ ಚೌಕಿ ಧಾರ್ಮಿಕ ಆಚರಣೆಗಳನ್ನು ಹಮ್ಮಿಕೊಳ್ಳುವುದಕ್ಕೆ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಜ್ಯೋತಿ ಜಾಗರಣ್ ಮಂಡಲ್ ಎಂಬ ಸಂಘಟನೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಉನ್ನತ ಪೀಠವನ್ನು ಸ್ಥಾಪಿಸಬೇಕು ಎಂದು ಮನವಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ ನ್ಯಾ.ಆರ್ ಎಫ್ ನಾರಿಮನ್ ಹಾಗೂ ಇಂದು ಮಲ್ಹೋತ್ರ ನೇತೃತ್ವದ ಪೀಠ, ಉನ್ನತ ಪೀಠವನ್ನು ಸ್ಥಾಪಿಸುವುದಕ್ಕೆ ಸಂಬಂಧಿಸಿದ ವಿಷಯವನ್ನು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ ಮಾಡಿದ್ದು, ಸರ್ಕಾರಿ ಪ್ರದೇಶದಲ್ಲಿ ಧಾರ್ಮಿಕ ಚಟುವಟಿಕೆಗಳಿಗೆ ಅನುಮತಿ ಇದೆಯೇ? ಎಂಬ ಪ್ರಶ್ನೆ ಕೇಳಿದೆ.
ಸರ್ಕಾರಿ ಪ್ರದೇಶದಲ್ಲಿ ಧಾರ್ಮಿಕ ಚಟುವಟಿಕೆಗಳಿಗೆ ಅನುಮತಿ ಇದೆಯೇ ಎಂಬ ಪ್ರಶ್ನೆಯನ್ನು ಈ ಅರ್ಜಿ ಹುಟ್ಟುಹಾಕಿದೆ. "ಚಂಚಲ್ ಪಾರ್ಕ್ ನಲ್ಲಿ ಧಾರ್ಮಿಕ ಆಚರಣೆ ನಡೆಸುವುದಕ್ಕೆ ಹಸಿರು ನ್ಯಾಯಪೀಠ ಅನುಮತಿ ನೀಡಿತ್ತು. ಆದರೆ ನಂತರದಲ್ಲಿ ಅನುಮತಿ ನಿರಾಕರಿಸಲಾಯಿತು ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಸಂಸ್ಥೆ ವಾದಿಸಿದೆ.