ನವದೆಹಲಿ; ಹಿಂಸಾಚಾರ ಯಾವುದೇ ರೂಪದಲ್ಲಿಯೇ ಇದ್ದರೂ ಅದನ್ನು ಖಂಡಿಸುತ್ತೇನೆ. ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಕಾನೂನಿನ ನಿಯಮಗಳು ಸರ್ವೋತ್ತಮವಾದದ್ದು ಎಂದು ಕೇಂದ್ರ ಸಚಿವ ಜಯಂತ್ ಸಿನ್ಹಾ ಅವರು ಶನಿವಾರ ಹೇಳಿದ್ದಾರೆ.
ರಾಮಘರ್'ನಲ್ಲಿ ನಡೆದ ಹತ್ಯೆ ಪ್ರಕರಣ ಸಂಬಂಧ ಬಿಡುಗಡೆಗೊಂಡಿರುವ ಆರೋಪಿಗಳನ್ನು ಸ್ವಾಗತಿಸಿದ ಕಾರಣ ಆಕ್ರೋಶಗಳು ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿರುವ ಅವರು, ಹಿಂಸಾಚಾರ ಯಾವುದೇ ರೂಪದಲ್ಲಿದ್ದರೂ ಅದನ್ನು ಖಂಡಿಸುತ್ತೇನೆ. ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಕಾನೂನು ನಿಯಮಗಳು ಸರ್ವೋತ್ತಮವಾದದ್ದು. ಕಾನೂನಿಗೆ ವಿರುದ್ಧವಾಗಿ ನಡೆಯುವವರನ್ನು ಶಿಕ್ಷಿಸಲಾಗುತ್ತದೆ ಎಂದು ಹೇಳಿದ್ದಾರೆ.
ಬಿಡುಗಡೆಗೊಂಡ ಬಳಿಕ 8 ಮಂದಿ ನನ್ನ ಮನೆಗೆ ಬಂದಿದ್ದರು. ಈ ವೇಳೆ ಅವರಿಗೆ ಶುಭಾಶಯಗಳನ್ನು ಹೇಳಿದ್ದೆ. ಭವಿಷ್ಯದಲ್ಲಿ ಕಾನೂನು ಕ್ರಮ ಕೈಗೊಳ್ಳಲಿದೆ. ಆರೋಪಿಗಳಿಗೆ ಶಿಕ್ಷೆಯಾಗಲಿದೆ, ಮುಗ್ಧರು ಬಿಡುಗಡೆಯಾಗುತ್ತಾರೆ. ನಾನೊಬ್ಬ ಸಾರ್ವಜನಿಕ ಪ್ರತಿನಿಧೆ. ಕಾನೂನು ಸಂರಕ್ಷಣೆ ಮಾಡುವುದಾಗಿ ನಾನು ಪ್ರಮಾಣವಚನ ಸ್ವೀಕಾರ ಮಾಡಿದ್ದೇನೆ. ನನ್ನ ನಿಲುವನ್ನು ನಾನು ಸ್ಪಷ್ಟಪಡಿಸಿದ್ದೇನೆ. ಆರೋಪಿಗಳಿಗೆ ಶಿಕ್ಷೆಯಾಗಲಿದೆ. ಕಾನೂನು ಕೈಗೆತ್ತಿಗೊಳ್ಳುವವರಿಗೆ ಶಿಕ್ಷೆಯಾಗಲಿದೆ.
ನ್ಯಾಯಾಂಗ ಮತ್ತು ಕಾನೂನಿನ ವ್ಯವಸ್ಥೆ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ನನ್ನ ಕ್ರಮದ ಕುರಿತು ಬೇಜವ್ದಾರಿ ಹೇಳಿಕೆಗಳು ಕೇಳಿ ಬರುತ್ತಿದ್ದು, ಇದು ನಿಜಕ್ಕೂ ದುರಾದೃಷ್ಟಕರ ಸಂಗತಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ನೀಡಲಾಗುವುದು ಎಂದು ಹೇಳಿದ್ದಾರೆ.
ಜಾರ್ಖಾಂಡ್'ನ ರಾಮಘರ್'ನಲ್ಲಿ ಮಾರ್ಚ್ 2018ರಲ್ಲಿ ಹತ್ಯೆಯೊಂದು ನಡೆದಿತ್ತು. ಪ್ರಕರಣ ಸಂಬಂಧ 11 ಮಂದಿ ಆರೋಪಿಗಳನ್ನು ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿ ಜೀವಾವಧಿ ಶಿಕ್ಷೆಯನ್ನೂ ನೀಡಿತ್ತು. ಆದರೆ, ಕಳೆದವಾರ ಹೈ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ರದ್ದುಪಡಿಸಿ, 8 ಮಂದಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು.
ಬಿಡುಗಡೆಗೊಂಡ ಆರೋಪಿಗಳೊಂದಿಗೆ ಜಯಂತ್ ಸಿನ್ಹಾ ಅವರು ತೆಗೆಸಿಕೊಂಡಿರುವ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಫೋಟೋ ವೈರಲ್ ಆಗಿದೆ.