ನವದೆಹಲಿ: ದಾವೂದಿ ಬೋಹ್ರಾ ಮುಸ್ಲಿಮ್ ಸಮುದಾಯ ಹಾಗೂ ಇತರರಲ್ಲಿ ಜಾರಿಯಲ್ಲಿರುವ ಯೋನಿ ಬೇಧನ, ಸುನತಿ ಪದ್ದತಿ ಕುರಿತಂತೆ ಸುಪ್ರೀಂ ಕೋರ್ಟ್ ಪ್ರಶ್ನೆ ಎತ್ತಿದೆ. ಮಗುವಿನ ದೈಹಿಕ "ಸಮಗ್ರತೆಯನ್ನು" ಹಾನಿಗೊಳಿಸುವ ಇಂತಹಾ ಆಚರಣೆಗಳು ಸರಿಯಲ್ಲ ಎಂದು ನ್ಯಾಯಾಲಯ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ಈ ಸಂಬಂಧ ವಿಚಾರಣೆ ನಡೆಸಿ "ಈ ಪದ್ದತಿಯು ಮಕ್ಕಳಿಗೆ ಸರಿಪಡಿಸಲಾಗದ ಹಾನಿಯನ್ನುಂಟು ಮಾಡಲಿದೆ.ಇಂತಹಾ ಆಚರಣೆ ನಿಷೇಧವಾಗಬೇಕು. ಅಮೆರಿಕಾ, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್ ಡಮ್ ಹಾಗು 27 ಆಫ್ರಿಕನ್ ರಾಷ್ಟ್ರಗಳು ಈ ಪದ್ದತಿಯನ್ನು ರದ್ದುಗೊಳಿಸಿದೆ ಎಂದಿದೆ.
ಯೋನಿ ಬೇಧನ, ಸುನತಿ ಸೇರಿ ಕೆಲ ಧಾರ್ಮಿಕ ಆಚರಣೆಗಳ ನಿಷೇಧಕ್ಕೆ ಕೇಂದ್ರ ಸರ್ಕಾರ ಬೆಂಬಲ ಸೂಚಿಸಿದೆ. ಇದೀಗ ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಕುರಿತಂತೆ ವಿಚಾರಣೆ ನಡೆಯುತ್ತಿದ್ದು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಜನನಾಂಗಗಳನ್ನು ಸ್ಪರ್ಷಿಸುವ ಇಂತಹಾ ಆಚರಣೆಗಳು ಪೋಸ್ಕೋ ಕಾಯ್ದೆಯಡಿಯಲ್ಲಿ ಅಪರಾಧ ಎನಿಸಿಕೊಳ್ಳಲಿದೆ ಎಂದು ನ್ಯಾಯಪೀಠ ಹೇಳಿದೆ.
ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ ಎಮ್ ಖಾನಿವಾಲ್ಕರ್ ಮತ್ತು ಡಿ ವೈ ಚಂದ್ರಚೂಡ್ ಅವರನ್ನೊಳಗೊಂಡ ಪೀಠ ಈ ವಿಚಾರಣೆ ನಡೆಸಿದ್ದು ಸುನತಿ, ಯೋನಿ ಬೇಧನ ಆಚರಣೆಗಳನ್ನು ನಿಷೇಧಿಸಬೇಕೆಂದು ಸುನೀತಾ ತಿವಾರಿ ಎಂಬುವವರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಹಿಂದೆ ನ್ಯಾಯಾಲಯವು ಮಹಿಳೆಯರ ಅಂಗ ಊನಕ್ಕೆ ಕಾರಣವಾಗಬಲ್ಲ ಇಂತಹಾ ಆಚರಣೆ ಭಾರತೀಯ ದಂಡ ಸಂಹಿತೆ ಮತ್ತು ಪಿಓಸಿಎಸ್ಒ ಕಾಯಿದೆಯಡಿ ಅಪರಾಧವಾಗುತ್ತದೆ, ಎಂದು ತೀರ್ಪು ನೀಡಿತ್ತು.ಏಪ್ರಿಲ್ 20ರಂದು ಈ ತೀರ್ಪು ಪ್ರಕಟವಾಗಿತ್ತು.