ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ
ನವದೆಹಲಿ; 2019ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದ್ದೇ ಆದರೆ, ಭಾರತ ಹಿಂದೂ ಪಾಕಿಸ್ತಾನವಾಗಲಿದೆ ಎಂಬ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಹೇಳಿಕೆಗೆ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ತೀವ್ರವಾಗಿ ಕಿಡಿಕಾರಿದ್ದು, ಶಶಿ ತರೂರ್ ಅವರಿಗೆ ವೈದ್ಯಕೀಯ ಸಹಾಯದ ಅಗತ್ಯವಿದೆ ಎಂದು ಗುರುವಾರ ಹೇಳಿದ್ದಾರೆ.
ಶಶಿ ತರೂರ್ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶಶಿ ತರೂರ್ ಬಗ್ಗೆ ಕೊಂಚ ಕರುಣೆ ತೋರಬೇಕಿದೆ. ತರೂರ್ ಅವರಿಗೆ ವೈದ್ಯಕೀಯ ಸಹಾಯದ ಅಗತ್ಯತೆ ಕುರಿತು ಅರಿತು, ಅಗತ್ಯವಿದ್ದರೆ, ಅವರನ್ನು ಮಾನಸಿಕ ರೋಗಿಗಳ ಆಸ್ಪತ್ರೆಗೆ ಕಳುಹಿಸಬೇಕಿದೆ ಎಂದು ವ್ಯಂಗ್ಯವಾಡಿದ್ದಾರೆ.
ಶಶಿ ತರೂರ್ ಅವರು ಏನಾದರೂ ತಿಂದು ಓವರ್ ಡೋಸ್ ಆಗಿದೆಯೋ ಎಂಬುದು ನನಗೆ ಗೊತ್ತಿಲ್ಲ. ಅವರ ಹೇಳಿಕೆಯನ್ನು ನೋಡಿದರೆ, ಅವರು ಬಹಶಷ್ಟು ಹತಾಶೆಯಲ್ಲಿರುವುದು ಸ್ಪಷ್ಟವಾಗುತ್ತಿದೆ. ಹಿಂದೂ ಪಾಕಿಸ್ತಾನ ಎಂದರೇನು? ಹಿಂದೂ ಪಾಕಿಸ್ತಾನದ ಅರ್ಥವೇನು? ತರೂರ್ ಪಾಕಿಸ್ತಾನದ ವಿರುದ್ಧವಿದ್ದಾರೆಯೇ? ಪಾಕಿಸ್ತಾನದ ಮೇಲೆ ಅಷ್ಟೊಂದು ಪ್ರೀತಿಯಿದ್ದರೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸಲು ಸಹಾಯ ಮಾಡುವಂತೆ ಪಾಕಿಸ್ತಾನದ ಪ್ರಧಾನಮಂತ್ರಿಗಳ ಬಳಿಯೇ ಸಹಾಯವನ್ನು ಕೇಳಲಿ. ತರೂರ್ ಅವರು ಈಗಾಗಲೇ ಪಾಕಿಸ್ತಾನದ ಗೆಳೆತಿಯನ್ನು ಹೊಂದಿದ್ದು, ಅವರು ಐಎಸ್ಐ ಪರವಾಗಿರುವ ಜನರಾಗಿದ್ದಾರೆಂದು ಹೇಳಿದ್ದಾರೆ.
ತರೂರ್ ಹೇಳಿಕೆ ಕುರಿತಂತೆ ಕಾಂಗ್ರೆಸ್ ನಿಲುವೇನು ಎಂದು ಇದೇ ವೇಳೆ ಸುಬ್ರಮಣಿಯನ್ ಸ್ವಾಮಿಯವರು ಪ್ರಶ್ನಿಸಿದ್ದಾರೆ.