ಸೊನಾಲ್ ಮಾನ್ ಸಿಂಗ್,ರಾಕೇಶ್ ಸಿನ್ಹಾ, ರಘುನಾಥ್ ಮೊಹಾಪಾತ್ರ
ನವದೆಹಲಿ: ಮಾಜಿ ಸಂಸದ ರಾಮ್ ಶಕಲ್, ಆರ್ ಎಸ್ ಎಸ್ ನಾಯಕ ರಾಕೇಶ್ ಸಿನ್ಹಾ, ನೃತ್ಯಗಾರ್ತಿ ಸೊನಾಲ್ ಮಾನ್ ಸಿಂಗ್ ಮತ್ತು ಶಿಲ್ಪಕಲಾವಿದ ರಘುನಾಥ್ ಮೊಹಾಪಾತ್ರ ಅವರನ್ನು ಇಂದು ರಾಜ್ಯಸಭೆಯ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿದೆ.
ಈ ನಾಲ್ವರು ಸದಸ್ಯರನ್ನು ನಾಮನಿರ್ದೇಶನಗೊಳಿಸಿ ಪ್ರಧಾನಿ ನರೇಂದ್ರಮೋದಿ ಹಾಗೂ ಪ್ರಧಾನಮಂತ್ರಿ ಕಾರ್ಯಾಲಯ ಕಳುಹಿಸಿದ ಶಿಫಾರಸ್ಸಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನುಮೋದನೆ ನೀಡಿದ್ದಾರೆ.
ರಾಮ್ ಶಕಲ್, ಉತ್ತರ ಪ್ರದೇಶದ ಜನನಾಯಕರಾಗಿದ್ದಾರೆ. ದಲಿತ ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಸಂಸತ್ತಿನ ಮಾಜಿ ಸದಸ್ಯರಾಗಿರುವ ಇವರು, ರೈತರು, ಕಾರ್ಮಿಕರು, ಹಾಗೂ ಆದಿವಾಸಿಗಳ ಪ್ರಮುಖ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತಾ ಬಂದಿದ್ದಾರೆ.
ರಾಕೇಶ್ ಸಿನ್ಹಾ, ಆರ್ ಎಸ್ ಎಸ್ ನಾಯಕರಾಗಿದ್ದು, ದೆಹಲಿ ಮೂಲಕ ಭಾರತೀಯ ನೀತಿ ಪೌಂಢೇಷನ್ ನ ಗೌರವಾನ್ವಿತ ನಿರ್ದೇಶಕರು ಹಾಗೂ ಚಿಂತಕರಾಗಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ಮೊತಿಲಾಲ್ ನೆಹರೂ ಕಾಲೇಜಿನಲ್ಲಿ ಪ್ರೋಫೆಸರ್ ಆಗಿದ್ದಾರೆ. ಅಲ್ಲದೇ ಭಾರತೀಯ ಸಾಮಾಜಿಕ ವಿಜ್ಞಾನ ಸಂಶೋಧನಾ ಸಮಿತಿಯ ಸದಸ್ಯರಾಗಿದ್ದಾರೆ.
ಮೊಹಾಪಾತ್ರ, 1959ರಿಂದಲೂ ಶಿಲ್ಪಕಲಾವಿದರಾಗಿದ್ದು, 2 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಸಾಂಪ್ರದಾಯಿಕ ಕಲೆ ಹಾಗೂ ಪುರಾತನ ಸ್ಮಾರಕಗಳನ್ನು ಸಂರಕ್ಷಿಸುವಲ್ಲಿ ಮಹತ್ತರ ಕೊಡುಗೆ ನೀಡಿದ್ದಾರೆ. ಪುರಿಯಲ್ಲಿನ ಸುಂದರ ಜಗನಾಥ್ ದೇವಾಲಯದ ಕೆತ್ತನೆ ಕೆಲಸ ಮಾಡಿದ್ದಾರೆ.
ಪಾರ್ಲಿಮೆಂಟ್ ನ ಸೆಂಟ್ರಲ್ ಹಾಲ್ ನಲ್ಲಿ ನಿರ್ಮಿಸಲಾಗಿರುವ ಆರು ಅಡಿ ಎತ್ತರದ ಮರಳಿನಿಂದ ಮಾಡಿದ ಸೂರ್ಯದೇವ ಪ್ರತಿಮೆ ಹಾಗೂ ಮರದಿಂದ ನಿರ್ಮಿಸಲಾಗಿರುವ ಬುದ್ಧ, ಪ್ಯಾರಿಸ್ ನಲ್ಲಿನ ಬುದ್ದದೇವಾಲಯ ಸೇರಿದಂತೆ ಹಲವು ಕಲಾಕೃತಿಗಳ ಮೂಲಕ ಇವರು ಪ್ರಸಿದ್ದಿಯಾಗಿದ್ದಾರೆ.
ಮನ್ ಸಿಂಗ್, ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿಯರಲ್ಲಿ ಒಬ್ಬರಾಗಿದ್ದಾರೆ. ಆರು ದಶಕಗಳಿಗೂ ಹೆಚ್ಚು ಕಾಲ ಭರತನಾಟ್ಯ ಹಾಗೂ ಒಡಿಶಿ ನೃತ್ಯ ಪ್ರದರ್ಶಿಸಿದ್ದಾರೆ. ಇವರು ಉತ್ತಮ ನೃತ್ಯ ಶಿಕ್ಷಕರು ಹಾಗೂ ಸಾಮಾಜಿಕ ಹೋರಾಟಗಾರರೂ ಆಗಿದ್ದಾರೆ. 1977ರಲ್ಲಿ ದೆಹಲಿಯಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯ ಕೇಂದ್ರವನ್ನು ಸ್ಥಾಪಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos