ತಿರುವನಂತಪುರಂ: ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ಕಾರ್ಯಕರ್ತರು ಕಾಂಗ್ರೆಸ್ ನಾಯಕ ಶಶಿ ತರೂರ್ ಕಚೇರಿ ಮೇಲೆ ಮಸಿ ಎರಚಿದ್ದಾರೆ.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಸ್ತಿತ್ವಕ್ಕೆ ಬಂದರೆ ಹಿಂದೂ ಪಾಕಿಸ್ತಾನ ನಿರ್ಮಾಣವಾಗುತ್ತದೆ ಎಂಬ ಶಶಿ ತರೂರ್ ಅವರ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತ ಶಶಿ ತರೂರ್ ಕಚೇರಿ ಮೇಲೆ ಮಸಿ ಎರಚಿದ್ದಾನೆ. ಈ ಘಟನೆ ನಡೆದ ವೇಳೆ ಶಶಿ ತರೂರ್ ಕಚೇರಿಯಲ್ಲಿರಲಿಲ್ಲ.
ಶಶಿ ತರೂರ್ ಅವರ ಕಚೇರಿ ಎದುರು ಘೋಷಣೆ ಕೂಗಿ ಪ್ರತಿಭಟನೆ ನಡೆಸಿರುವ ಕಾರ್ಯಕರ್ತರು, ಕಚೇರಿಯೊಳಗೆ ನುಗ್ಗಿ ಹಿಂದೂ ಪಾಕಿಸ್ತಾನ ಕಚೇರಿ ಎಂಬ ಬ್ಯಾನರ್ ನ್ನೂ ಕಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಿರುವನಂತಪುರಂ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್ ಸುರೇಶ್, ಶಶಿ ತರೂರ್ ಅವರ ತಪ್ಪು ಹೇಳಿಕೆ ಬಗ್ಗೆ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ, ಇದೊಂದು ಸಹಜವಾದ ಪ್ರತಿಭಟನೆ ಎಂದು ಹೇಳಿದ್ದಾರೆ.