ರಾಂಚಿ : ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ತನ್ನ ಮೇಲಿನ ಹಲ್ಲೆ ಪ್ರಕರಣವನ್ನು ಬೆಳಕಿಗೆ ತರುವ ಮೂಲಕ ಪ್ರಚಾರ ಗಿಟ್ಟಿಸುವ ಹುನ್ನಾರ ನಡೆಸುತ್ತಿದ್ದಾರೆ ಜಾರ್ಖಂಡ್ ನ ಬಿಜೆಪಿ ಮುಖಂಡ ಚಂದ್ರೇಶ್ವರ್ ಪ್ರಸಾದ್ ಸಿಂಗ್ ಆರೋಪಿಸಿದ್ದಾರೆ.
ಸ್ವಾಮಿ ಅಗ್ನಿವೇಶ್ ಅವರಿಗೆ ವೇದಿಕೆ ಮೇಲೆ ಹಲ್ಲೆ ನಡೆಸುವ ವಿಚಾರ ಮೊದಲೇ ಅವರಿಗೆ ಗೊತಿತ್ತು. ಪ್ರಚಾರಕ್ಕಾಗಿ ಈ ರೀತಿಯ ವ್ಯವಸ್ಥಿತ ಷಢ್ಯಂತ್ರ ನಡೆಸಲಾಗಿದೆ ಎಂದು ಅವರು ಟೀಕಿಸಿದ್ದಾರೆ.
ವಿದೇಶಿ ಹಣವನ್ನು ಸಂರಕ್ಷಿಸುತ್ತಿರುವ ಸ್ವಾಮಿ ಅಗ್ನಿವೇಶ್ ಭಾರತದ ಸಂಸ್ಕೃತಿಯನ್ನು ನಾಶಪಡಿಸುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆ ನಡೆದ್ದರೆ, ವೇದಿಕೆ ಮೇಲೆ ನಡೆದ ಹಲ್ಲೆಗಾಗಿ ಸ್ವಾಮಿ ಅಗ್ನಿವೇಶ್ ಹಾಗೂ ಅವರ ಕಡೆಯವರು ಎಷ್ಟು ಹಣ ಖರ್ಚು ಮಾಡಿದ್ದರು ಎಂಬುದು ಬಹಿರಂಗವಾಗಲಿದೆ ಎಂದು ಸಿಂಗ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಕೇಸರಿ ಬಟ್ಟೆ ತೊಟ್ಟಿರುವ ಸ್ವಾಮಿ ಅಗ್ನಿವೇಶ್ ವಂಚಕ , ಸ್ವಾಮಿ ಅಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾರ್ಖಂಡ್ ನ ಪಕೂರ್ ಜಿಲ್ಲೆಯಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿ ನಿರ್ಗಮಿಸುವಾಗ ಸ್ವಾಮಿ ಅಗ್ನಿವೇಶ್ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಆದರೆ, ಆ ಕಾರ್ಯಕರ್ತರು ನಮ್ಮ ಪಕ್ಷದ ಕಾರ್ಯಕರ್ತರಲ್ಲ ಎಂದು ಬಿಜೆಪಿ ಹೇಳಿಕೆ ನೀಡಿದೆ.
ಈ ಘಟನೆ ನಂತರ ಸ್ವಾಮಿ ಅಗ್ನಿವೇಶ್ ಅವರಿಗೆ ಜಾರ್ಖಂಡ್ ರಾಜ್ಯಸರ್ಕಾರದಿಂದ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ರಘುಬರ್ ದಾಸ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ.