ನವದೆಹಲಿ: ಸಂಸತ್ತಿ ಮುಂಗಾರು ಅಧಿವೇಶನ ನಡೆಯುತ್ತಿದ್ದು, ಈ ನಡುವಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 5 ದಿನಗಳ ಕಾಲ ವಿದೇಶಿ ಪ್ರವಾಸ ಕೈಗೊಂಡಿರುವುದಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಮೋದಿ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
ಮೋದಿ ಪ್ರವಾಸ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಸಂಸತ್ತಿನಲ್ಲಿ ಅಧಿವೇಶನ ಪ್ರಗತಿಯಲ್ಲಿದೆ. ವಿದೇಶದಲ್ಲಿ ನಡೆಯುತ್ತಿರುವ ಸಭೆಗಳನ್ನು ಮೋದಿಯವರು ನಿಯಂತ್ರಿಸಬಹುದಿತ್ತು. ಅದೇನು ಆಹ್ವಾನಿತ ಸಭೆಯಾಗಿರಲಿಲ್ಲ. ಬಹುಮತ ಇರುವ ಕಾರಣ ಸಂಸತ್ತು ಅಧಿವೇಶನವನ್ನು ಬಿಟ್ಟು, ವಿದೇಶೀ ಪ್ರವಾಸ ಕೈಗೊಂಡಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ.
ಬೊಫೋರ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸಂಸತ್ತು ಜಂಟಿ ಸಮಿತಿಯನ್ನು ರಚನೆ ಮಾಡಲಾಗಿತ್ತು. ಇದೀಗ ರಫೇಲ್ ಒಪ್ಪಂದ ಕುರಿತಂತೆಯೂ ಸಮಿತಿಯನ್ನು ರಚನೆ ಮಾಡಬೇಕು. ಯುದ್ಧ ವಿಮಾನಗಳು ಅಗ್ಗದ ದರವನ್ನು ಹೊಂದಿದ್ದೇ ಆಗಿದ್ದರೆ, ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಮೋದಿ ಹೇಳಿಕೆ ನೀಡಬೇಕಿತ್ತು. ಭ್ರಷ್ಟಾಚಾರವನ್ನು ಮರೆಮಾಚುವ ಸಲುವಾಗಿ ಇದೀಗ ಬಿಜೆಪಿ ಹೇಳಿಕೆಗಳನ್ನು ನೀಡುತ್ತಿದೆ ಎಂದು ತಿಳಿಸಿದ್ದಾರೆ.