ಲಂಡನ್: ತಲೆಮರೆಸಿಕೊಳ್ಳಲು ಅಲ್ಲ, ವ್ಯಾಪಾರಕ್ಕಾಗಿ ಆ್ಯಂಟಿಗುವಾ ನಾಗರೀಕತ್ವ ಪಡೆದಿರುವೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಹುಕೋಟಿ ವಂಚನೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿ ಹೇಳಿದ್ದಾರೆ.
ಕೆರಿಬಿಯನ್ ದೇಶಗಳಲ್ಲಿ ಒಂದಾದ ಆ್ಯಂಟಿಗುವಾ ಮತ್ತು ಬಾರ್ಬುಡಾ ದೇಶಗಳ ನಾಗರೀಕತ್ವಕ್ಕೆ ಭಾರತದ ಖ್ಯಾತ ಆಭರಣ ಉದ್ಯಮಿ ಮೆಹುಲ್ ಚೋಕ್ಸಿ ಅರ್ಜಿ ಹಾಕುತ್ತಿದ್ದಂತೆಯೇ ಭಾರತದಲ್ಲಿ ಎದುರಾಗಿದ್ದ ವ್ಯಾಪಕ ಟೀಕೆಗಳಿಗೆ ಉದ್ಯಮಿ ಮೆಹುಲ್ ಚೋಕ್ಸಿ ಉತ್ತರಿಸಿದ್ದು, ನಾನು ತಲೆಮರೆಸಿಕೊಳ್ಳಲು ಕೆರಿಬಿಯನ್ ದೇಶಗಳ ನಾಗರಿಕತ್ವ ಪಡೆದಿಲ್ಲ. ವ್ಯಾಪರಕ್ಕಾಗಿ ಆ್ಯಂಟಿಗುವಾ ಮತ್ತು ಬಾಬ್ರುಡಾ ನಾಗರಿಕತ್ವಕ್ಕೆ ಅರ್ಜಿ ಹಾಕಿದ್ದೇನೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮೆಹುಲ್ ಚೋಕ್ಸಿ ಪರ ವಕೀಲ ಡೇವಿಡ್ ಡೋರ್ಸೆಟ್ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಭಾರತ ಸರ್ಕಾರ ಮತ್ತು ಭಾರತೀಯ ಮಾಧ್ಯಮಗಳು ಮಾಡಿರುವು ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ನಾನು ಕೆರಿಬಿಯನ್ ದೇಶಗಳ ಕಾನೂನಿನಂತೆಯೇ ಹೂಡಿಕೆ ಕಾರ್ಯಕ್ರಮದ ಅಡಿ ನಾಗರಿಕತ್ವಕ್ಕೆ ಅರ್ಜಿ ಸಲ್ಲಿಸಿರುವೆ. ನಾಗರಿಕತ್ವಕ್ಕಾಗಿ ನಾನು ಯಾವುದೇ ವಂಚನೆ ಮಾಡಿಲ್ಲ. 2017ರ ನವೆಂಬರ್ ನಲ್ಲೇ ನನಗೆ ಆ್ಯಂಟಿಗುವಾ ನಾಗರಿಕತ್ವ ದೊರಕಿತ್ತು. ಕೇವಲ ನನ್ನ ವ್ಯಾಪಾರ ವಿಸ್ತರಣೆ ಮಾಡುವ ಒಂದೇ ಉದ್ದೇಶದಿಂದ ನಾನು ನಾಗರಿಕತ್ವ ಪಡೆದಿರುವ ಮತ್ತಾವುದೇ ದುರುದ್ದೇಶವಿಲ್ಲ. 2018ರ ಜನವರಿಯಿಂದ ನಾನು ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಮೆಹುಲ್ ಚೋಕ್ಸಿ ಹೇಳಿದ್ದಾರೆ.
ಇನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ನೀರವ್ ಮೋದಿ ಮತ್ತು ಆತನ ಅಂಕಲ್ ಮೆಹುಲ್ ಚೋಕ್ಸಿ ವಿರುದ್ಧ ಭಾರತದಲ್ಲಿ ಇಡಿ, ಆದಾಯ ತೆರಿಗೆ ಅಧಿಕಾರಿಗಳು ಮತ್ತು ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos