ದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದ್ದು, ದೆಹಲಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ನೀಡಿದ ವರದಿಯನ್ನು ಸಿಎಂ ಕೇಜ್ರಿವಾಲ್ ವೇದಿಕೆಯಲ್ಲೇ ಹರಿದು ಹಾಕಿದ್ದಾರೆ.
ಇಂದು ನಗರದ ನಿವಾಸಿಗಳ ಕಲ್ಯಾಣ ಸಂಘಗಳು ಹಾಗೂ ಮಾರುಕಟ್ಟೆ ಸಂಘಗಳನ್ನು ಉದ್ದೇಶಿಸಿ ಮಾತನಾಡಿದ ದೆಹಲಿ ಸಿಎಂ, ಸ್ಥಳೀಯ ವ್ಯಕ್ತಿಗಳು ಸಿಸಿ ಟಿವಿ ಅಳವಡಿಸುವುದಾದರೆ ಲೈಸೆನ್ಸ್ ಪಡೆಯಬೇಕು ಎಂದು ಲೆಫ್ಟಿನೆಂಟ್ ಗವರ್ನರ್ ಹೇಳಿದ್ದಾರೆ. ಆದರೆ ಲೆಸೆನ್ಸ್ ಪಡೆಯಬೇಕೆಂದರೆ ಹಣ ಕೊಡಬೇಕು, ಇಂಥ ಹಣ ಪೀಕಿಸುವ ಆದೇಶವನ್ನು ಹರಿದು ಹಾಕಬೇಕು ಎಂದು ಹೇಳಿ ವೇದಿಕೆಯಲ್ಲೇ ಹರಿದು ಹಾಕಿದರು.
ಲೆಫ್ಟಿನೆಂಟ್ ಗವರ್ನರ್ ವರದಿಯನ್ನು ವಿರೋಧಿಸಿದ ಕೇಜ್ರಿವಾಲ್ ಅವರು, ಲೆಫ್ಟಿನೆಂಟ್ ಗವರ್ನರ್ ಸಮಿತಿಯಲ್ಲಿ ಪೊಲೀಸರಿದ್ದಾರೆ. ಹೀಗಾಗಿ ದೆಹಲಿಯಲ್ಲಿ ಯಾರಾದರೂ ತಮ್ಮ ಸ್ವಂತ ಹಣದಲ್ಲಿ ಸಿಸಿಟಿವಿ ಅಳವಡಿಸಲು ಪೊಲೀಸರಿಂದ ಲೈಸೆನ್ಸ್ ಪಡೆಯಬೇಕು ಎಂದು ಆದೇಶಿಸಲಾಗಿದೆ. ಲೈಸೆನ್ಸ್ ಪಡೆಯಬೇಕೆಂದರೆ ಹಣ ಕೊಡಬೇಕು ಎಂದರ್ಥ ಎಂದಿದ್ದಾರೆ.