ನವದೆಹಲಿ; ದಶಕಗಳ ಬಳಿಕ ಇದೇ ಮೊದಲ ಬಾರಿಗೆ ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟ ಆಚರಣೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನಿರಾಕರಿಸಿದ್ದು, ಇಫ್ತಾರ್ ಕೂಟ ನಿರಾಕರಿಸಿರುವುದಕ್ಕೆ ನಿಜವಾದ ಕಾರಣವೇನು ಎಂಬುದು ಇದೀಗ ಬಹಿರಂಗಗೊಂಡಿದೆ.
ರಾಷ್ಟ್ರಪತಿ ಕೋವಿಂದ್ ಅವರು ಇಫ್ತಾರ್ ಕೂಟ ನಿರಾಕರಿಸಿರುವುದರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರಾಷ್ಟ್ರಪತಿಗಳ ಮಾಧ್ಯಮ ಕಾರ್ಯದರ್ಶಿ ಅಶೋಕ್ ಮಲಿಕ್ ಅವರು, ಕೆಳೆದ ಜುಲೈನಲ್ಲಿ ಕೋವಿಂದ್ ಅವರು ಅಧಿಕಾರಕ್ಕೆ ಬಂದಿದ್ದರು. ಅಧಿಕಾರಕ್ಕೆ ಬಂದ ಕೂಡಲೇ ರಾಷ್ಟ್ರಪತಿ ಭವನದಲ್ಲಿ ಯಾವುದೇ ರೀತಿಯ ಧಾರ್ಮಿಕ ಆಚರಣೆಗಳನ್ನು ಆಚರಿಸದಿರಲು ನಿರ್ಧರಿಸಿದ್ದರು ಎಂದು ಹೇಳಿದ್ದಾರೆ.
ಜುಲೈ ತಿಂಗಳಿನಲ್ಲಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ದೀಪಾವಳಿ, ಕ್ರಿಸ್'ಮಸ್, ಹೋಳಿ ಸೇರಿದಂತೆ ಯಾವುದೇ ಧಾರ್ಮಿಕ ಹಬ್ಬಗಳನ್ನು ಆಚರಿಸಿಲ್ಲ. ಅದೇ ರೀತಿ ಇಫ್ತಾರ್ ಕೂಟವನ್ನೂ ಆಚರಿಸದಂತೆ ನಿರ್ಧರಿಸಲಾಗಿದೆ.
ರಾಷ್ಟ್ರಪತಿ ಭವನ ಸಾರ್ವಜನಿಕ ಕಟ್ಟಡವಾಗಿದ್ದು, ತೆರಿಗೆದಾರರ ಹಣದಿಂದ ಯಾವುದೇ ಧಾರ್ಮಿಕ ಕಾರ್ಯಗಳನ್ನು ಇಲ್ಲಿ ನಡೆಸಲಾಗುವುದಿಲ್ಲ. ನಮ್ಮದು ಜಾತ್ಯಾತೀತ ರಾಷ್ಟ್ರವಾಗಿದ್ದು, ಈ ನಿಯಮ ಎಲ್ಲಾ ಧರ್ಮಗಳಿಗೂ ಅನ್ವಯಿಸುತ್ತದೆ. ರಾಷ್ಟ್ರಪತಿ ಎಲ್ಲಾ ಧಾರ್ಮಿಕ ಹಬ್ಬಗಳಂದು ರಾಷ್ಟ್ರದ ಜನತೆಗೆ ಶುಭಕೋರುವರು ಎಂದು ತಿಳಿಸಿದ್ದಾರೆ.