ದೇಶ

ಕಾಂಗ್ರೆಸ್ ಅತೃಪ್ತ ಶಾಸಕರಿಂದ ರಾಹುಲ್ ಗಾಂಧಿ ಭೇಟಿ, ಎಂ.ಬಿ. ಪಾಟೀಲ್ ಗೆ ಸಿಗದ ಭರವಸೆ

Lingaraj Badiger
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶನಿವಾರ ಶಾಸಕ ಎಂ ಬಿ ಪಾಟೀಲ್ ನೇತೃತ್ವದ ಸಚಿವ ಸ್ಥಾನ ವಂಚಿತ ಬಂಡಾಯ ಶಾಸಕರನ್ನು ಭೇಟಿ ಮಾಡಿದ್ದು, ಶಾಸಕರ ಮನವೊಲಿಸುವಲ್ಲಿ ವಿಫಲವಾಗಿದ್ದಾರೆ.
ಇನ್ನು ಉಪ ಮುಖ್ಯಮಂತ್ರಿ ಅಥವಾ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಎಂ.ಬಿ. ಪಾಟೀಲ್ ಅವರಿಗೂ ರಾಹುಲ್ ಗಾಂಧಿ ಯಾವುದೇ ಸ್ಪಷ್ಟ ಭರವಸೆ ನೀಡಿಲ್ಲ ಎನ್ನಲಾಗಿದೆ.
ಎಂ.ಬಿ.ಪಾಟೀಲ್ ಅವರು ರಾಹುಲ್‌ ಗಾಂಧಿ ಅವರೊಂದಿಗೆ ಸುಮಾರು 45 ನಿಮಿಷ ಚರ್ಚೆ ನಡೆಸಿ ಕರ್ನಾಟಕದ ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ವಿವರಿಸಿದ್ದಾರೆ.
ರಾಹುಲ್ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್, ನಾನು ಉಪ ಮುಖ್ಯಮಂತ್ರಿ, ಸಚಿವ ಸ್ಥಾನ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಹೈಕಮಾಂಡ್‌ ಮುಂದೆ ಈ ಯಾವುದೇ ಪ್ರಸ್ತಾಪ, ಬೇಡಿಕೆಯನ್ನು ಇಟ್ಟಿಲ್ಲ. ಈ ಸಭೆಗೆ ಸಂಬಂಧಿಸಿದಂತೆ ಸತೀಶ್‌ ಜಾರಕಿಹೊಳಿ ಸೇರಿ ನನ್ನ ಇತರ ಅತೃಪ್ತ ಸ್ನೇಹಿತರೊಂದಿಗೆ ಚರ್ಚಿಸಿ ಮುಂದಿನ ನಡೆ ನಿರ್ಧರಿಸಲಿದ್ದೇನೆ ಎಂದರು.
ಇದೇ ವೇಳೆ, ಕಾಂಗ್ರೆಸ್ ತೊರೆಯುವ ಯಾವುದೇ ಯೋಚನೆ ನನಗೆ ಇಲ್ಲ ಎಂದು ಎಂ.ಬಿ.ಪಾಟೀಲ್ ಅವರು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ದಿನೇಶ್‌ ಗುಂಡುರಾವ್‌, ಸಂಸದೀಯ ವ್ಯವಹಾರ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಸಹ ಸಭೆಯಲ್ಲಿ ಭಾಗಿಯಾದರು.
ಸಭೆಯ ಬಳಿಕ ಸುದ್ದಿಗಾರರರೊಂದಿಗೆ ಮಾತನಾಡಿದ ಕೃಷ್ಣ ಭೈರೇಗೌಡ ಅವರು, ಭಿನ್ನಮತ ಶಮನಗೊಳಿಸುವ ಯತ್ನ ನಡೆದಿದೆ. ಇನ್ನೂ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದರು.
SCROLL FOR NEXT