ಗೋರಖ್ ಪುರ: ಗೋರಖ್ ಪುರ ಬಿಆರ್ ಡಿ ಆಸ್ಪತ್ರೆಯ ಶಿಶುಗಳ ಸರಣಿ ಸಾವು ಪ್ರಕರಣದ ಆರೋಪಿ ವೈದ್ಯ ಡಾ.ಕಫೀಲ್ ಖಾನ್ ರ ಸಹೋದರ ಕಸೀಫ್ ಜಮೀಲ್ ಎಂಬುವವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.
ತೀವ್ರ ಗಾಯಗೊಂಡಿರುವ ಕಸೀಫ್ ಜಮೀಲ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಬೈಕ್ನಲ್ಲಿ ಮನೆಗೆ ಹೋಗುತ್ತಿದ್ದ ಅವರಿಗೆ ಗೋರಖ್ ನಾಥ ದೇವಸ್ಥಾನ ಬಳಿ ಗುಂಡು ಹಾರಿಸಲಾಗಿದೆ. ಮೂರು ಗುಂಡು ನೇರವಾಗಿ ಕತ್ತು ಮತ್ತು ತೋಳಿಗೆ ಗಾಯಗಳಾಗಿವೆ. ಪ್ರಸ್ತುತ ಜಮೀಲ್ ಮಾತನಾಡುವ ಸ್ಥಿತಿಯಲ್ಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನುವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಜಮೀಲ್ ಅವರು ವರ್ಷದ ಹಿಂದಷ್ಟೇ ವಿವಾಹವಾಗಿದ್ದರು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕಫೀಲ್ ಖಾನ್, ನನ್ನ ಸಹೋದರ ಆರೋಗ್ಯ ಸ್ಥಿರವಾಗಿದೆ. ಆದರೆ ಆತನನ್ನು ಕೊಲ್ಲು ಪ್ರಯತ್ನ ಮಾಡಲಾಗಿದೆ. ಈ ಮೊದಲೇ ನಾನು ಆತನಿಗೆ ಜೀವ ಬೆದರಿಕೆ ಕರೆಗಳ ಕುರಿತು ಹೇಳಿದ್ದೆ ಎಂದು ಹೇಳಿದ್ದಾರೆ.
ಈ ಹಿಂದೆ ಉತ್ತರ ಪ್ರದೇಶದ ಗೋರಕ್ ಪುರದ ಬಿಆರ್ ಡಿ ಆಸ್ಪತ್ರೆಯಲ್ಲಿ ನಡೆದಿದ್ದ ಮಕ್ಕಳ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ. ಕಫೀಲ್ ಖಾನ್ ಅವರನ್ನು ಬಂಧಿಸಲಾಗಿತ್ತು. ಎಂಟು ತಿಂಗಳ ಸೆರೆವಾಸದ ಬಳಿಕ ಇತ್ತೀಚೆಗಷ್ಟೇ ಕಫೀಲ್ ಖಾನ್ ಜಾಮಿನನ ಮೇಲೆ ಬಿಡುಗಡೆಯಾಗಿದ್ದಾರೆ. ಇತ್ತೀಚೆಗಷ್ಡೇ ಇದೇ ಕಫೀಲ್ ಖಾನ್ ಮಾರಕ ನಿಫಾ ವೈರಸ್ ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡಲು ಕೇರಳಕ್ಕೆ ತೆರಳುವ ಇಂಗಿತವನ್ನು ವ್ಯಕ್ತಪಡಿಸಿದ್ದರು.