ಚೆನ್ನೈ; ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪ ಹಿನ್ನಲೆಯಲ್ಲಿ 16 ಎಐಎಡಿಎಂಕೆ ಶಾಸಕರನ್ನು ಉಚ್ಛಾಟನೆಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಭಿನ್ನ ತೀರ್ಪು ನೀಡಿದ್ದು, ಈ ಹಿನ್ನಲೆಯಲ್ಲಿ ಪಳನಿಸ್ವಾಮಿ ಸರ್ಕಾರಕ್ಕೆ ಬಿಗ್ ರಿಲೀಫ್ ದೊರಕಿದಂತಾಗಿದೆ.
ಕಳೆದ ಆಗಸ್ಟ್ ತಿಂಗಳಿನಲ್ಲಿ ದಿನಕರನ್ ಬೆಂಬಲಕ್ಕೆ ನಿಂತಿದ್ದ ಶಾಸಕರು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದ್ದರು. ಇದರಿಂಡ ಎಐಎಡಿಎಂಕೆ ಪಕ್ಷದ ವಿರುದ್ಧ ಶಾಸಕರು ನಡೆದುಕೊಂಡ ಹಿನ್ನಲೆಯಲ್ಲಿ ತಮಿಳುನಾಡು ವಿಧಾನಸಭೆ ಸ್ಪೀಕರ್ 16 ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು.
ಸ್ಪೀಕರ್ ಅವರ ಈ ನಿಲುವನ್ನು ಖಂಡಿಸಿದ ಶಾಸಕರು, ಸಭಾಧ್ಯಕ್ಷ ಆದೇಶವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.
ಈ ಅರ್ಜಿಯನ್ನು ಇಂದು ವಿಚಾರಣೆ ನಡೆಸಿರುವ ಮದ್ರಾಸ್ ಹೈಕೋರ್ಟ್ ದ್ವಿಸದಸ್ಯ ಪೀಠ, ಸ್ಪೀಕರ್ ಆದೇಶವನ್ನು ಎತ್ತಿ ಹಿಡಿದಿದೆ. ಆದರೆ, ಇಬ್ಬರು ನ್ಯಾಯಾಧೀಶರ ತೀರ್ಪಿನಲ್ಲಿ ಭಿನ್ನ ಆದೇಶ ಹೊರ ಬಂದಿರುವ ಹಿನ್ನಲೆಯಲ್ಲಿ ವಿಚಾರಣೆಯನ್ನು ಮೂರನೇ ನ್ಯಾಯಮೂರ್ತಿಗಳಿಗೆ ವರ್ಗಾವಣೆ ಮಾಡಲಾಗಿದೆ.
ಮತ್ತೊಮ್ಮೆ ಈ ಪ್ರಕರಣದ ವಿಚಾರಣೆ ನಡೆಯಲಿದ್ದು, ತ್ರಿಸದಸ್ಯ ಪೀಠ ನೀಡುವ ತೀರ್ಪು ಅಂತಿಮವಾಗಲಿದೆ ಎಂದು ಹೇಳಲಾಗುತ್ತಿದೆ.