ದೇಶ

ಕಾವೇರಿ ಕುರಿತು 'ಸುಪ್ರೀಂ' ಸ್ಪಷ್ಟ ನಿರ್ದೇಶನ, ಹೆಚ್'ಡಿಕೆ-ಮೋದಿ ಭೇಟಿ ವ್ಯರ್ಥ ಸಮಯ: ತಮಿಳುನಾಡು ಸಚಿವ

Manjula VN
ಚೆನ್ನೈ; ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಸುಪ್ರೀಂಕೋರ್ಟ್ ಈಗಾಗಲೇ ಸ್ಪಷ್ಟ ನಿರ್ದೇಶನ ನೀಡಿದ್ದು, ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿರುವುದು ವ್ಯರ್ಥ ಸಮಯವಷ್ಟೇ ಎಂದು ತಮಿಳುನಾಡು ಸಚಿವ ಡಿ.ಜಯಕುಮಾರ್ ಅವರು ಮಂಗಳವಾರ ಹೇಳಿದ್ದಾರೆ. 
ಕಾವೇರಿ ವಿವಾದ ಸಂಬಂಧ ಕುಮಾರಸ್ವಾಮಿಯವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವ ಹಿನ್ನಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾವೇರಿ ವಿವಾದ ಸಂಬಂಧ ಸುಪ್ರೀಂಕೋರ್ಟ್ ಸ್ಪಷ್ಟ ನಿರ್ದೇಶನವನ್ನು ನೀಡಿದೆ. ಕುಮಾರಸ್ವಾಮಿಯವರು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿರುವುದ ವ್ಯರ್ಥ ಸಮಯವಷ್ಟೇ. ಕುಮಾರಸ್ವಾಮಿಯಾಗಲೀ, ನಾರಾಯಣ ಸ್ವಾಮಿಯಾಗಲೀ ಅಥವಾ ಇನ್ನು ಯಾರೇ ಸ್ವಾಮಿಗಳಾದರೂ, ನಮ್ಮಲ್ಲಿ ಕಾವೇರಿ ನಿರ್ವಹಣಾ ಮಂಡಳಿಯಿದ್ದು, ಮಂಡಳಿಯೇ ಮುಖ್ಯ ಸ್ವಾಮಿಯಾಗಿದೆ ಎಂದು ತಿಳಿಸಿದ್ದಾರೆ. 
ರಾಜಧಾನಿ ನವದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ನಿನ್ನೆಯಷ್ಟೇ ಕಾವೇರಿ ವಿವಾದ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ನಿತಿನ್ ಗಡ್ಕರಿಯವನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. 
ಮಾತುಕತೆ ವೇಳೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಕುರಿತು ಗೆಜೆಟ್ ನಲ್ಲಿನ ಲೋಪಗಳನ್ನು ಸರಿಪಡಿಸುವಂತೆ ಮನವಿ ಮಾಡಿಕೊಂಡಿದ್ದರು. 
SCROLL FOR NEXT