ದೇಶ

ಗೌರಿ ಹತ್ಯೆ ಪ್ರಕರಣ: ಬಂಧಿತ ಆರೋಪಿ ಶಾಂತ, ಸರಳ ವ್ಯಕ್ತಿಯಾಗಿದ್ದ; ಸ್ಥಳೀಯರು

Manjula VN
ಮುಂಬೈ: ಹಿರಿಯ ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಆರೋಪಿ ಅಮೋಲ್ ಕಾಳೆ ಶಾಂತ ಹಾಗೂ ಸರಳ ವ್ಯಕ್ತಿಯಾಗಿದ್ದ ಎಂದು ಆತನ ನೆರೆಮನೆಯವರು ಹೇಳಿದ್ದಾರೆ. 
ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದ ಕಾಳೆ ಪುಣೆಯ ಪಿಂಪ್ರಿ-ಚಿಂಚ್ವಾಡ ಲಿಂಕ್ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಪತ್ನಿ, 5 ವರ್ಷದ ಹಾಗೂ ವಯಸ್ಸಾದ ತಾಯಿಯೊಂದಿಗೆ ವಾಸವಿದ್ದ. ಕೆಲ ದಿನಗಳ ಹಿಂದಷ್ಟೇ ಆರೋಪಿ ಕಾಳೆ ತಂದೆ ಮೃತಪಟ್ಟಿದ್ದರು. 
ಅಮೋಲ್ ಕಾಳೆ ಮಗ ಮನೆಯ ಹತ್ತಿರದಲ್ಲೇ ಇರುವ ಶಾಲೆಗೆ ಹೋಗುತ್ತಿದ್ದು, ದಂಪತಿಗಳು ಸರಳ ಜೀವನ ಶೈಲಿಯನ್ನು ಹೊಂದಿದ್ದರು ಎಂದು ನೆರೆಮನೆಯವರು ಹೇಳಿದ್ದಾರೆ. 
ಮಾಣಿಕ್ ಕಾಲೋನಿ ಬಳಿಯಿರುವ ಅಕ್ಷಯ್ ಪ್ಲಾಜಾ ಬಳಿಯಿರುವ ನಿವಾಸಿಗಳು ಮಾತನಾಡಿ, ಗೌರಿ ಲಂಕೇಶ್ ಅಂತಹವರ ಕೊಲೆ ಪ್ರಕರಣದಲ್ಲಿ ಇಂತಹ ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿಯೊಬ್ಬ, ನಮ್ಮ ಮನೆಯ ಪಕ್ಕದಲ್ಲೇ ಇದ್ದ ವ್ಯಕ್ತಿ ಪಾತ್ರ ಹೊಂದಿದ್ದಾನೆಂದು ನಂಬುವುದಕ್ಕೆ ಬಹಳ ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ,
ಕಳೆದ 15 ವರ್ಷಗಳಿಂದಲೂ ನಮ್ಮ ಅಪಾರ್ಟ್ ಮೆಂಟ್ ಪಕ್ಕದಲ್ಲಿಯೇ ಇದ್ದರೂ, ಕಾಳೆ ಕುಟುಂಬದ ಬಗ್ಗೆ ಕೆಲವರಿಗೆ ಮಾತ್ರ ತಿಳಿದಿತ್ತು. 
ಪಿಂಪ್ರಿ ಕ್ಯಾಂಪ್ ಬಳಿ ಅಮೋಲ್ ಕಾಳೆ ತಂದೆ ಸಣ್ಣ ತಂಬಾಕು ಹಾಗೂ ಬೀಡಿ ಅಂಗಡಿಯನ್ನು ನಡೆಸುತ್ತಿದ್ದರು. ಅಮೋಲ್ ಕಾಳೆ ಸ್ಟಾಕ್ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸುತ್ತಿದ್ದ. ಇತರೆ ನೆರೆಮನೆಯವರೊಂದಿಗೆ ಕಾಳೆ ಕುಟುಂಬ ಬೆರೆಯುತ್ತಿರಲಿಲ್ಲ. ಕಾಳೆ ಚಿಂಚ್ವಾಡ ಘಟಕದ ಹಿಂದೂ ಜಾಗೃತಿ ಸಮಿತಿ ಸಂಚಾಲಕನಾಗಿ, ಬಲಪಂಧೀಯ ಸಂಘಟನೆಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ ಎಂದು ಮತ್ತೊಬ್ಬ ನಿವಾಸಿ ಹೇಳಿಕೊಂಡಿದ್ದಾರೆ. 
ಗೌರಿ ಹತ್ಯೆ ಪ್ರಕರಣ ಸಂಬಂಧ ಅಮೋಲ್ ಕಾಳೆಯನ್ನು ಎಸ್ಐಟಿ ಅಧಿಕಾರಿಗಳು ಮೇ.31 ರಂದು ಬಂಧನಕ್ಕೊಳಪಡಿಸಿದ್ದರು. 
SCROLL FOR NEXT