ಭೋಪಾಲ್: 65 ವರ್ಷದ ದಲಿತ ರೈತನ ಸಜೀವ ದಹನ: ನಾಲ್ವರ ಬಂಧನ
ಭೋಪಾಲ್: 62 ವರ್ಷದ ದಲಿತ ರೈತನನ್ನು ಸಜೀವ ದಹನ ಮಾಡಿರುವ ಘಟನೆ ಭೋಪಾಲ್ ನಲ್ಲಿ ನಡೆದಿದ್ದು, ಒಂದೇ ಕುಟುಂಬದ ನಾಲ್ವರನ್ನು ಬಂಧಿಸಲಾಗಿದೆ.
ಭೋಪಾಲ್ ನಿಂದ 70 ಕಿಮೀ ದೂರದಲ್ಲಿರುವ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಸಹಾಯಕಳಾಗಿದ್ದ ಪತ್ನಿಯ ಎದುರೇ ಕಿಶೋರಿಲಾಲ್ ಜತವ್ ನ್ನು ಸಜೀವದಹನ ಮಾಡಲಾಗಿದೆ. ರೈತನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತನನ್ನು ಬದುಕಿಸಲು ಸಾಧ್ಯವಾಗಲಿಲ್ಲ.
ಭೋಪಾಲ್ ಉತ್ತರ ಭಾಗದ ಎಸ್ ಪಿ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ರೈತನನ್ನು ಹತ್ಯೆ ಮಾಡಿದ ತಿರನ್ ಸಿಂಗ್ ಯಾದವ್ ಆತನ ಪುತ್ರ ಪ್ರಕಾಶ್, ಇಬ್ಬರು ಸಂಬಂಧಿಕರಾದ ಸಂಜು ಹಾಗೂ ಬಲ್ಬೀರ್ ರನ್ನು ಗುರುವಾರ ರಾತ್ರಿ ಬಂಧಿಸಲಾಗಿದ್ದು ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಿಶೋರಿಲಾಲ್ ಕುಟುಂಬದವರು ಹಲವು ವರ್ಷಗಳಿಂದ ಕೃಷಿ ಮಾಡುತ್ತಿದ್ದ ಭೂಮಿಯಲ್ಲಿ ಯಾದವ್ ಹಾಗೂ ಇತರ ನಾಲ್ಕು ಮಂದಿ ಟ್ರಾಕ್ಟರ್ ನಲ್ಲಿ ಉಳುಮೆ ಮಾಡಿದ್ದನ್ನು ಕಂಡ ಕಿಶೋರಿಲಾಲ್ ಅದನ್ನು ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಕಿಶೋರಿ ಲಾಲ್ ಮೇಲೆ ಹಲ್ಲೆ ನಡೆದಿದ್ದು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಈ ಘಟನೆ ಕಿಶೋರಿಲಾಲ್ ರ ಪತ್ನಿ ಎದುರೇ ನಡೆದಿದ್ದು ಅಸಹಾಯಕಳಾಗಿದ್ದ ಪತ್ನಿ ಕುಟುಂಬ ಸದಸ್ಯರಿಗೆ ಹಾಗೂ ನೆರೆಯವರಿಗೆ ವಿಷಯ ಮುಟ್ಟಿಸಿದ್ದಾರೆ. ಎಲ್ಲಾ ಪ್ರಯತ್ನಗಳ ನಡುವೆಯೂ ಕಿಶೋರಿಲಾಲ್ ನ್ನು ಉಳಿಸಿಕೊಳ್ಳುವುದು ಸಾಧ್ಯವಾಗಲಿಲ್ಲ.