ನವದೆಹಲಿ: 1975 ರ ತುರ್ತುಪರಿಸ್ಥಿತಿ ಬಗ್ಗೆ ಟೀಕಿಸುತ್ತಿರುವ ಬಿಜೆಪಿ ನಾಲ್ಕು ವರ್ಷಗಳ ಅವಧಿಯ ಅಘೋಷಿತ ತುರ್ತುಪರಿಸ್ಥಿತಿಗಾಗಿ ಕ್ಷಮೆಯಾಚಿಸಬೇಕೆಂದು ಹಿರಿಯ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಒತ್ತಾಯಿಸಿದ್ದಾರೆ.
ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಜನರಿಗೆ ಬೆದ್ದರಿಕೆವೊಡ್ಡಲಾಗುತ್ತಿದೆ. ನಾಗರಿಕ ಸ್ವಾತಂತ್ರ್ಯ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಈ ಕಾರಣದಿಂದ ಬಿಜೆಪಿ ಕ್ಷಮೆಯಾಚಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
2019 ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ತುರ್ತುಪರಿಸ್ಥಿತಿಯನ್ನು ಬಿಜೆಪಿ ಹೆಚ್ಚು ಪ್ರಚುರಪಡಿಸುತ್ತಿದೆ ಎಂದು ಸೋನಿಯಾಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಆಗಿರುವ ಅಹ್ಮದ್ ಪಟೇಲ್ ಆರೋಪಿಸಿದ್ದು, ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಲ್ಲಿರುವ ಬಿಜೆಪಿ 1975ರ ತುರ್ತುಪರಿಸ್ಥಿತಿಯನ್ನು ಸೇಡಿಗಾಗಿ ಬಳಸಿಕೊಳ್ಳಲು ಯತ್ನಿಸಲಾಗುತ್ತಿದೆ. ಆದರೆ, ಇಂದಿರಾಗಾಂಧಿ ಕ್ಷಮೆ ಕೋರಿದ ಬಳಿಕ ಮತ್ತೆ ಅವರನ್ನು ಬಹುಮತದೊಂದಿಗೆ ಅವರನ್ನು ಗೆಲ್ಲಿಸಲಾಯಿತು ಎಂದು ಅವರು ಹೇಳಿದ್ದಾರೆ.