ಕೊಟ್ಟಾಯಂ: ಮಹಿಳೆಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಕೇರಳದ ಚರ್ಚ್ ಒಂದರ ಐವರು ಪಾದ್ರಿಗಳನ್ನು ಅಮಾನತು ಮಾಡಲಾಗಿದೆ.
ಕೊಟ್ಟಾಯಂ ನಲ್ಲಿರುವ ಮಲಂಕರ ಆರ್ಥಡಕ್ಸ್ ಚರ್ಚ್ ನ ಐವರು ಪಾದ್ರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಚರ್ಚ್ ಕಾರ್ಯದರ್ಶಿ ಬಿಜು ಒಮ್ಮೆನ್ ಹೇಳಿದ್ದಾರೆ.
ಪ್ರಕರಣ ಸಂಬಂಧ ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಂಡಿರುವ ಚರ್ಚ್ ಪಾದ್ರಿಗಳನ್ನು ಅಮಾನತುಗೊಳಿಸಿ, ತನಿಖೆಗೆ ಸಮಿತಿಯೊಂದನ್ನು ನೇಮಿಸಿದೆ. ಪ್ರಕರಣ ತನಿಖೆಯಲ್ಲಿದ್ದು ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಪಾದ್ರಿಯೊಬ್ಬ ಮಹಿಳೆಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ, ಈ ವೇಳೆ ಆ ವಿಷಯವನ್ನು ಮತ್ತೊಬ್ಬ ಪಾದ್ರಿಗೆ ಹೇಳಿ ಮಹಿಳೆ ಸಹಾಯ ಕೋರಿದ್ದಾಳೆ, ಆತ ಕೂಡ ಆಕೆಗೆ ಬೆದರಿಕೆ ಒಡ್ಡಿ ಉಳಿದ ಪಾದ್ರಿಗಳಿಗೂ ವಿಷಯ ತಿಳಿಸಿ ಸಂಪರ್ಕ ಬೆಳೆಸಿದ್ದಾನೆ. ಒಟ್ಟು 5 ಪಾದ್ರಿಗಳು ಮಹಿಳೆಗೆ ಲೈಂಗಿಕ ಶೋಷಣೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಚರ್ಚ್ ನ ಪಾದ್ರಿಗಳ ಈ ನಡವಳಿಕೆ ಎಲ್ಲರಿಗೂ ಶಾಕ್ ಮೂಡಿಸಿದೆ, ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆಗೊಳಗಾಗಿದೆ. ಈ ಪ್ರಕರಣಕ್ಕೆ ಹೆಚ್ಚಿನ ಪಬ್ಲಿಸಿಟಿ ಕೊಡುತ್ತಿರುವುಗು ನಮಗೆ ಆತಂಕ ತಂದಿದೆ ಎಂದು ಒಮೆನ್ ಹೇಳಿದ್ದಾರೆ, ಆದರೆ ಸಂತ್ರಸ್ತೆ ಇದುವರೆಗೂ ಪೊಲೀಸರಿಗೆ ದೂರು ದಾಖಲಿಸಿಲ್ಲ.