ನವದೆಹಲಿ:ಎಐಎಡಿಎಂಕೆಯ 18 ಶಾಸಕರ ಅನರ್ಹತೆ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎಂ ಸತ್ಯನಾರಾಯಣನ್ ಅವರು ವಿಚಾರಣೆ ನಡೆಸಿ ಆದೇಶ ನೀಡಲಿದ್ದಾರೆ ಎಂದು ಬುಧವಾರ ಸುಪ್ರೀಂ ಕೋರ್ಟ್ ಹೇಳಿದೆ.
ಮದ್ರಾಸ್ ಹೈಕೋರ್ಟ್ ತಮ್ಮ ಶಾಸಕತ್ವ ಅನರ್ಹತೆಗೆ ಸಂಬಂಧಿಸಿದಂತೆ ಎರಡು ಭಿನ್ನ ನಿಲುವು ತಳೆದಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಸುಪ್ರೀಂ ಕೋರ್ಟ್ ಗೆ ವರ್ಗಾಯಿಸಬೇಕು ಎಂದು ಎಐಎಡಿಎಂಕೆಯ ೧೮ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಎಸ್ ಕೆ ಪೌಲ್ ಅವರನ್ನೊಳಗೊಂಡ ರಜಾ ಕಾಲದ ಪೀಠ, ಪ್ರಕರಣವನ್ನು ಮತ್ತೆ ಮದ್ರಾಸ್ ಹೈಕೋರ್ಟ್ ಗೆ ವರ್ಗಾಯಿಸಿದೆ.
ಮದ್ರಾಸ್ ಹೈಕೋರ್ಟ್ ಎಐಎಡಿಎಂಕೆಯ 18 ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಕಳೆದ ಜೂನ್ 14ರಂದು ಒಡಕು ತೀರ್ಪು ನೀಡಿದ್ದು, ಪ್ರಕರಣವನ್ನು ಮೂರನೇ ನ್ಯಾಯಾಧೀಶರಿಗೆ ವಹಿಸಲಾಗಿದ್ದು, ಅವರ ಅಭಿಪ್ರಾಯ ಆಧರಿಸಿ ತೀರ್ಪು ಹೊರಬೀಳಲಿದೆ.
ಆದರೆ ಇದು ಒಂದು ಗಂಭೀರ ವಿಷಯವಾಗಿರುವುದರಿಂದ ಸುಪ್ರೀಂ ಕೋರ್ಟ್ ಇದರ ವಿಚಾರಣೆ ನಡೆಸಬೇಕು ಎಂದು 18 ಶಾಸಕರ ಪರವಾಗಿ ಹಾಜರಿದ್ದ ಹಿರಿಯ ವಕೀಲ ವಿಕಾಸ್ ಸಿಂಗ್ ವಾದಿಸಿದ್ದರು.