ನವದೆಹಲಿ: ಆಫ್ರಿಕನ್ ಮಹಿಳೆಯರು ವಾಸಿಸುತ್ತಿದ್ದ ಪ್ರದೇಶದಲ್ಲಿ ಮಧ್ಯರಾತ್ರಿ ದಾಳಿ ನಡೆಸಿದ್ದ ಮಾಜಿ ಕಾನೂನು ಸಚಿವ ಹಾಗೂ ಹಾಲಿ ಆಪ್ ಶಾಸಕ ಸೋಮನಾಥ್ ಭಾರ್ತಿ ಅವರ ವಿರುದ್ಧ ಕಿರುಕುಳ ಹಾಗೂ ಅತಿಕ್ರಮಣ ಆರೋಪ ದಾಖಲಿಸುವಂತೆ ದೆಹಲಿ ಕೋರ್ಟ್ ಆದೇಶಿಸಿದೆ.
ಸೋಮನಾಥ್ ಭಾರ್ತಿ ಹಾಗೂ ಇತರೆ 16 ಆರೋಪಿಗಳ ವಿರುದ್ಧ ಸೆಕ್ಷೆನ್ ಸೆಕ್ಷನ್ 147/149 (ದಂಗೆ), 354 (ದೌರ್ಜನ್ಯ), 342 (ತಪ್ಪಾಗಿ ಬಂಧನ), 506 (ಕ್ರಿಮಿನಲ್ ಬೆದರಿಕೆ), 143 (ನ್ಯಾಯಸಮ್ಮತವಲ್ಲದ ಸಭೆ), 509 (ಮಹಿಳೆಯರ ಗೌರವಕ್ಕೆ ಧಕ್ಕೆ ), 153 ಎ ಅಡಿ ದೋಷಾರೋಪ ದಾಖಲಿಸುವಂತೆ ದೆಹಲಿ ಪೊಲೀಸರಿಗೆ ಪಟಿಯಾಲ ಹೌಸ್ ಕೋರ್ಟ್ ಆದೇಶಿಸಿದೆ.
ದಕ್ಷಿಣ ದೆಹಲಿಯ ಖಿರ್ಕಿ ಎಕ್ಸ್ಟೆನ್ಷನ್ ನಲ್ಲಿರುವ ಉಗಾಂಡ ಮತ್ತು ನೈಜೀರಿಯಾದ ಪ್ರಜೆಗಳು ವ್ಯಭಿಚಾರ ನಡೆಸುತ್ತಿದ್ದಾರೆ. ಮಾದಕ ದ್ರವ್ಯ ಜಾಲವನ್ನೂ ಮುನ್ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದ ಅಂದಿನ ದೆಹಲಿ ಕಾನೂನು ಸಚಿವ ಸೋಮನಾಥ್ ಭಾರ್ತಿ ಅವರು, ಕ್ರಮ ತೆಗೆದುಕೊಳ್ಳುವಂತೆ ದೆಹಲಿ ಪೊಲೀಸರಿಗೆ ಆದೇಶಿಸಿದ್ದರು. ಆದರೆ ವಾರಂಟ್ ಇಲ್ಲದೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಪೊಲೀಸರು ಕೈ ಚೆಲ್ಲಿದ್ದರು. ಇದರಿಂದ ಕೆಂಡವಾಗಿದ್ದ ಭಾರ್ತಿ, ಆಪ್ ಕಾರ್ಯಕರ್ತರನ್ನು ಒಟ್ಟು ಮಾಡಿಕೊಂಡು ಜೂನ್ 15, 2014ರ ಮಧ್ಯರಾತ್ರಿ ಆಫ್ರಿಕಾದ ನಾಲ್ವರು ಹೆಣ್ಣುಮಕ್ಕಳು ವಾಸಿಸುತ್ತಿದ್ದ ಮನೆಯ ಮೇಲೆ ದಾಳಿ ನಡೆಸಿದ್ದರು. ಅವರು ಮೂತ್ರ ಪರೀಕ್ಷೆಗೆ ಒಳಪಡುವಂತೆ ಬಲವಂತ ಪಡಿಸಿದ್ದರು. ಭಾರ್ತಿ ಅವರ ಈ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಈ ಸಂಬಂಧ ಸೋಮನಾಥ್ ಭಾರ್ತಿ ಹಾಗೂ ಇತರೆ 16 ಮಂದಿ ವಿರುದ್ಧ ಕೇಸ್ ದಾಖಲಿಸಲಾಗಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos