ಶಿಲ್ಲಾಂಗ್: ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿರುವ ಮೇಘಾಲಯದಲ್ಲಿ ಸರ್ಕಾರ ರಚನೆ ಕಸರತ್ತು ಭರದಿಂದ ಸಾಗಿದ್ದು. ಕಾಂಗ್ರೆಸ್ ಬಳಿಕ ಇದೀಗ ಸರ್ಕಾರ ರಚನೆಗೆ ಅನುಮತಿ ನೀಡಬೇಕು ಎಂದು ಬಿಜೆಪಿ ನಾಯಕರ ತಂಡ ರಾಜ್ಯಪಾಲರ ಭೇಟಿ ಮಾಡಲು ಮುಂದಾಗಿದೆ.
ನಿನ್ನೆ ಪ್ರಕಟವಾದ ರಾಜ್ಯ ವಿಧಾನಸಭಾ ಫಲಿತಾಂಶ ಮೇಘಾಲಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ಮಾಡಿದ್ದು, ಮೇಘಾಲಯದ ಒಟ್ಟು 59 ಸ್ಥಾನಗಳ ಪೈಕಿ ಕಾಂಗ್ರೆಸ್ ಗೆ ಅತೀ ಹೆಚ್ಚು ಅಂದರೆ 21 ಸ್ಥಾನ, ಎನ್ ಪಿಪಿಗೆ 19 ಸ್ಥಾನ, ಬಿಜೆಪಿ 2 ಹಾಗೂ ಇತರರು 17 ಸ್ಥಾನ ಗಳಿಸಿದ್ದಾರೆ. ಆದರೆ ಮೇಘಾಲಯದಲ್ಲಿ ಸರ್ಕಾರ ರಚನೆಗೆ 31 ಸ್ಥಾನಗಳ ಅಗತ್ಯತೆ ಇದ್ದು, ಯಾವುದೇ ರಾಜಕೀಯ ಪಕ್ಷಕ್ಕೂ ಪೂರ್ಣ ಬಹುಮತ ಇಲ್ಲ. ಹೀಗಾಗಿ ಸ್ಥಳೀಯ ಪಕ್ಷಗಳು ಹಾಗೂ ಸ್ವತಂತ್ರ್ಯ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಬಿಜೆಪಿ ಕೂಡ ಮುಂದಾಗಿದೆ.
ಹಾಲಿ ಬಲಾಬಲದಲ್ಲಿ ಬಿಜೆಪಿ ಕೇವಲ 2 ಸ್ಥಾನಗಳಿಸಿದ್ದು, ಯುನೈಟೆಡ್ ಡೆಮೋಕ್ರಟಿಕ್ ಪಕ್ಷ 6 ಸ್ಥಾನ ಹೊಂದಿದ್ದು, ಪೀಪಲ್ಸ್ ಡೆಮೋಕ್ರಟಿಕ್ಸ್ ಪಕ್ಷ ನಾಲ್ಕು ಸ್ಥಾನಗಳನ್ನು ಹೊಂದಿದೆ. ಈ ಎರಡೂ ಪಕ್ಷಗಳ ಬೆಂಬಲವಲ್ಲದೇ ಇತರೆ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಬಿಜೆಪಿ ಸರ್ಕಾರ ರಚನೆ ಮಾಡುವ ಕುರಿತು ರಣತಂತ್ರ ರೂಪಿಸುತ್ತಿದೆ.
ಇನ್ನು ಕಾಂಗ್ರೆಸ್ ಬೆಂಬಲ ಕೋರಿರುವ ನ್ಯಾಷನಲ್ ಪೀಪಲ್ಸ್ ಪಾರ್ಟಿ ಪ್ರಸ್ತುತ ಮಣಿಪುರದಲ್ಲಿ ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚನೆ ಮಾಡಿದ್ದು, ಮೇಘಾಲಯದಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಎನ್ ಪಿಪಿ ಬೆಂಬಲ ದೂರದ ಮಾತಾಗಿದೆಯಾದರೂ, ಮೇಘಾಲಯದಲ್ಲಿ ಕಾಂಗ್ರೆಸ್ 21 ಸ್ಥಾನಗಳನ್ನು ಗಳಿಸುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಹೀಗಾಗಿ ರಾಜಕೀಯ ಲೆಕ್ಕಾಚಾರಗಳು ಇದೀಗ ಆರಂಭವಾಗಿದ್ದು, ಯಾವ ಕ್ಷಣಗಲ್ಲಾದರೂ ಇದು ಟ್ವಿಸ್ಟ್ ಪಡೆಯಬಹುದು.
ಇದಕ್ಕೂ ಮೊದಲು ಕಾಂಗ್ರೆಸ್ ಮೈತ್ರಿ ಕೂಟ ಸರ್ಕಾರ ರಚನೆಗೆ ಮುಂದಾಗಿದ್ದು, ಯುನೈಟೆಡ್ ಡೆಮೋಕ್ರಟಿಕ್ ಪಕ್ಷ ಮತ್ತು ಪೀಪಲ್ಸ್ ಡೆಮೋಕ್ರಟಿಕ್ಸ್ ಪಕ್ಷದೊಂದಿಗೆ ಕೈ ಜೋಡಿಸಿ ಸರ್ಕಾರ ರಚನೆ ಮಾಡುವುದಾಗಿ ಘೋಷಣೆ ಮಾಡಿದೆ. ಯುನೈಟೆಡ್ ಡೆಮೋಕ್ರಟಿಕ್ ಪಕ್ಷ 6 ಸ್ಥಾನ ಹೊಂದಿದ್ದು, ಪೀಪಲ್ಸ್ ಡೆಮೋಕ್ರಟಿಕ್ಸ್ ಪಕ್ಷ ನಾಲ್ಕು ಸ್ಥಾನಗಳನ್ನು ಹೊಂದಿದೆ. ಈ ಎರಡೂ ಪಕ್ಷಗಳು ಕಾಂಗ್ರೆಸ್ ನೊಂದಿಗೆ ಕೈ ಜೋಡಿಸಿದರೆ, ಮೈತ್ರಿಕೂಟದ ಸ್ಥಾನ 31 ಆಗಲಿದ್ದು, ಆಗ ಕಾಂಗ್ರೆಸ್ ಸರ್ಕಾರ ರಚನೆ ಮಾಡಬಹುದು. ಇದೇ ಕಾರಣಕ್ಕೆ ಕಾಂಗ್ರೆಸ್ ರಾಜ್ಯ ಸಭಾ ಸದಸ್ಯ ಅಹ್ಮದ್ ಪಟೇಲ್ ನೇತೃತ್ವದ ಕಾಂಗ್ರೆಸ್ ನಿಯೋಗ ಶಿಲ್ಲಾಂಗ್ ನಲ್ಲಿ ರಾಜ್ಯ ಪಾಲ ಗಂಗಾ ಪ್ರಸಾದ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಈ ವೇಳೆ ಹಿರಿಯ ಕಾಂಗ್ರೆಸ್ ಮುಖಂಡರಾದ ಕಮಲ್ ನಾಥ್, ಅಹ್ಮದ್ ಪಟೇಲ್, ಸಿಪಿ ಜೋಷಿ ಅವರು ಕೂಡ ಜೊತೆಯಲ್ಲಿದ್ದರು.