ನವದೆಹಲಿ: ಬಹುಕೋಟಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್ ಮತ್ತು ಎಕ್ಸಿಸ್ ಬ್ಯಾಂಕ್ ಮುಖ್ಯಸ್ಥರಿಗೆ ಸಿಬಿಐ ಮಂಗಳವಾರ ಸಮನ್ಸ್ ಜಾರಿ ಮಾಡಿದೆ.
ಐಸಿಐಸಿಐ ಬ್ಯಾಂಕ್ ನ ಮುಖ್ಯಸ್ಥರಾದ ಚಂದಾ ಚಚ್ಛರ್ ಹಾಗೂ ಎಕ್ಸಿಸ್ ಬ್ಯಾಂಕ್ ಮುಖ್ಯಸ್ಥರಾದ ಶಿಖಾ ಶರ್ಮಾ ಅವರಿಗೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಸಮನ್ಸ್ ಜಾರಿ ಮಾಡಿದೆ. ಗೀತಾಂಜಲಿ ಸಂಸ್ಥೆಯ ನಿರ್ದೇಶಕ ಮೆಹುಲ್ ಚೋಕ್ಸಿ ಅವರಿಗೆ ಸುಮಾರು 31 ಬ್ಯಾಂಕ್ ಗಳಿಂದ ಸುಮಾರು 5280 ಕೋಟಿ ಸಾಲ ನೀಡುವಲ್ಲಿ ಈ ಎರಡೂ ಬ್ಯಾಂಕ್ ಗಳು ಪ್ರಮುಖ ಪಾತ್ರವಹಿಸಿದ್ದವು. ಕಳೆದ ವಾರವಷ್ಟೇ ಪ್ರಕರಣ ಸಂಬಂಧ ಹೇಳಿಕೆ ನೀಡಿದ್ದ ಐಸಿಐಸಿಐ ಬ್ಯಾಂಕ್ ನೀರವ್ ಮೋದಿ ಸಂಸ್ಥೆಯ ಯಾವುದೇ ಸಾಲವನ್ನು ಬಹಿರಂಗ ಪಡಿಸಿಲ್ಲ. ಆದರೆ ಮೆಹುಲ್ ಚೋಕ್ಸಿ ಅವರ ಗೀತಾಂಜಲಿ ಸಮೂಹ ಸಂಸ್ಥೆಗಳಿಗೆ 405 ಕೋಟಿ ರೂ.ಗಳ ಸಾಲ ನೀಡಲಾಗಿತ್ತು ಎಂದು ಹೇಳಿತ್ತು.
ಇನ್ನು ಈ ಹೇಳಿಕೆ ಬೆನ್ನಲ್ಲೇ ಸಿಬಿಐ ಚಂದಾ ಚಚ್ಛರ್ ಹಾಗೂ ಶಿಖಾ ಶರ್ಮಾ ಅವರಿಗೆ ಗಂಭೀರ ವಂಚನೆ ಪ್ರಕರಣ ಸಂಬಂಧ ಸಮನ್ಸ್ ಜಾರಿ ಮಾಡಿದ್ದು, ಶೀಘ್ರ ಸಮನ್ಸ್ ಗೆ ಉತ್ತರ ನೀಡುವಂತೆ ಸಿಬಿಐ ಸೂಚನೆ ನೀಡಿದೆ. ಅಂತೆಯೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಬಿಐ ಕೂಡ ಎರಡು ಪ್ರಮುಖ ಬ್ಯಾಂಕ್ ಗಳ ಮುಖ್ಯಸ್ಥರಿಗೆ ವಿವರ ಕೋರಿ ಸಮನ್ಸ್ ನೀಡಲಾಗಿದೆಯಷ್ಟೇ. ಅವರನ್ನು ಆರೋಪಿಗಳಾಗಿ ಬಿಂಬಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಸಿಬಿಐನಿಂದ ಗೀತಾಂಜಲಿ ಸಂಸ್ಥೆಯ ಉಪಾಧ್ಯಕ್ಷರಾದ ವಿಪುಲ್ ಚೈತಾಲಿಯಾ ವಿಚಾರಣೆ
ಇದೇ ವೇಳೆ ಉದ್ಯಮಿ ಮೆಹುಲ್ ಚೋಕ್ಸಿ ನೇತೃತ್ವದ ಗೀತಾಂಜಲಿ ಸಂಸ್ಥೆಯ ಉಪಾಧ್ಯಕ್ಷರಾದ ವಿಪುಲ್ ಚೈತಾಲಿಯಾ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ. ಮುಂಬೈ ವಿಮಾನ ನಿಲ್ಗಾಣದಿಂದ ವಿಪುಲ್ ಚಿತಾಲಿಯಾ ಅವರನ್ನು ವಶಕ್ಕೆ ಪಡೆದ ಸಿಬಿಐ ಅಧಿಕಾರಿಗಳು ಅಲ್ಲಿಂದ ನೇರವಾಗಿ ಬಾಂದ್ರಾ ಕುರ್ಲಾದಲ್ಲಿರುವ ಸಿಬಿಐ ಕಚೇರಿಗೆ ಕರೆತಂದು ವಿಚಾರಣೆ ನಡೆಸಿದರು.