ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಗೌರವ ತೋರಿದ ಹಿನ್ನೆಲೆಯಲ್ಲಿ ಬಿಎಸ್ಎಫ್ ಯೋಧನ ಏಳು ದಿನಗಳ ವೇತನಕ್ಕೆ ಕಡಿತಕ್ಕೆ ನೀಡಿದ್ದ ಆದೇಶವನ್ನು ಬುಧವಾರ ಹಿಂಪಡೆಯಲಾಗಿದೆ.
ಮೋದಿ ಅವರಿಗೆ ಗೌರವಾನ್ವಿತ ಅಥವಾ 'ಶ್ರೀ' ಎಂದು ಸಂಬೋಧಿಸಿದ ಹಿನ್ನೆಲೆಯಲ್ಲಿ ಬಿಎಸ್ಎಫ್ ಯೋಧನಿಗೆ ಶಿಕ್ಷೆ ರೂಪದಲ್ಲಿ ಏಳು ದಿನಗಳ ವೇತನ ಕಡಿತಗೊಳಿಸಲು ಆದೇಶಿಸಲಾಗಿತ್ತು. ಆದರೆ ಈ ಕುರಿತು ಪ್ರಧಾನಿ ಮೋದಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನಂತರ ಬಿಎಸ್ ಎಫ್ ವೇತನ ಕಡಿತ ಆದೇಶವನ್ನು ಹಿಂಪಡೆದಿದೆ.
ಪ್ರಧಾನಿ ಮೋದಿ ಅವರು ಯೋಧನಿಗೆ ನೀಡಿರುವ ಶಿಕ್ಷೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದ್ದಾರೆ. ಹೀಗಾಗಿ ಹಿಂಪಡೆಯಲಾಗಿದೆ ಎಂದು ಅರೆಸೇನಾಪಡೆಯ ವಕ್ತಾರರು ತಿಳಿಸಿದ್ದಾರೆ.
ಒಟ್ಟಾರೆ ಘಟನೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಶಿಕ್ಷೆಯನ್ನು ಹಿಂಪಡೆಯಬೇಕೆಂದೂ ಸೂಚಿಸಿದ್ದಾರೆ ಎಂದು ಬಿಎಸ್ಎಫ್ ಟ್ವಿಟರ್ನಲ್ಲಿ ತಿಳಿಸಿದೆ.
ಕಳೆದ ಫೆಬ್ರವರಿ 21ರಂದು ಪಶ್ಚಿಮ ಬಂಗಾಳದ ನಾಡಿಯಾದ ಮಹತ್ಪುರದಲ್ಲಿನ ಬಿಎಸ್ಎಫ್ನ 15ನೇ ಬೆಟಾಲಿಯನ್ ಮುಖ್ಯ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದಭದಲ್ಲಿ ಬಿಎಸ್ಎಫ್ ಯೋಧ ಸಂಜೀವ್ ಕುಮಾರ್ "ಮೋದಿ ಕಾರ್ಯಕ್ರಮ' ಎಂದು ಸಂಬೋಧಿಸಿದ್ದರು.
ಇದು ಸೇನೆಯ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದು. ಯೋಧ ಸಂಜೀವ್ ಕುಮಾರ್ ವಿರುದ್ಧ ಶಿಸ್ತು ಕ್ರಮ ಜರುಗಿಸಿದ್ದಾರೆ. ಈ ಬಗ್ಗೆ ನಡೆದ ವಿಚಾರಣೆಯಲ್ಲಿ ಯೋಧ ಸಂಜೀವ್ ಕುಮಾರ್ ಬಿಎಸ್ಎಫ್ ಕಾಯ್ದೆಯ ಸೆಕ್ಷನ್ 40ರ ಅನ್ವಯ ತಪ್ಪಿತಸ್ಥ ಎಂಬ ನಿರ್ಧಾರಕ್ಕೆ ಬಂದಿದ್ದು, ಶಿಕ್ಷೆಯಾಗಿ ಯೋಧನ 7 ದಿನಗಳ ವೇತನವನ್ನು ಕಡಿತಗೊಳಿಸಲಾಗಿತ್ತು.