ಚೆನ್ನೈ: ದಶಕಗಳಿಂದ ಪ್ರತಿ ವರ್ಷ ಹಿಮಾಲಯಕ್ಕೆ ತೆರಳಿ ಧ್ಯಾನದಲ್ಲಿ ಮಗ್ನರಾಗುವ ತಮಿಳು ಸೂಪರ್ ಸ್ಟಾರ್ ಹಾಗೂ ರಾಜಕಾರಣಿ ರಜನಿಕಾಂತ್ ಅವರು ತಮಿಳುನಾಡಿನಲ್ಲಿ ಅಧಿಕೃತವಾಗಿ ತಮ್ಮ ರಾಜಕೀಯ ಯಾತ್ರೆ ಆರಂಭಿಸುವ ಮುನ್ನ ಈಗ ಮತ್ತೆ ಹಿಮಾಲಯಕ್ಕೆ ತೆರಳಿದ್ದಾರೆ.
ಹಿಮಾಲಯಕ್ಕೆ ವಾರ್ಷಿಕ ಯಾತ್ರೆ ಕೈಗೊಳ್ಳುವ ರಜನಿಕಾಂತ್ ಅವರು ಉತ್ತರಾಖಂಡ್ ನ ದುನಾಗಿರಿಯಲ್ಲಿ ಧ್ಯಾನ ಮಾಡುತ್ತ, ಸಾಧು ಸಂತರೊಂದಿಗೆ ಕಾಲ ಕಳೆಯುತ್ತಾರೆ.
ರಜನಿಕಾಂತ್ ಅವರು ಇಂದು ಬೆಳಗ್ಗೆ ಹಿಮಾಲಯ ಯಾತ್ರೆಗೆ ತೆರಳಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಪ್ರಶ್ನೆಗೆ ಹೆಚ್ಚಿನ ವಿವರ ನೀಡಿಲು ನಿರಾಕರಿಸಿದ ತಲೈವಾ, ತಾನು ಸುಮಾರು 2 ವಾರಗಳ ಕಾಲ ದೂರ ಇರಲಿದ್ದೇನೆ ಎಂದು ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.
ಈ ಹಿಂದಿನ ಹಿಮಾಲಯ ಭೇಟಿಯ ನಂತರ ಕಾಕತಾಳೀಯ ಎಂಬಂತೆ ರಜನಿಕಾಂತ್ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಪ್ರಸಕ್ತ ವರ್ಷದಲ್ಲಿ ರಜನಿಕಾಂತ್ ಅವರು ರಾಜಕೀಯ ಪ್ರವೇಶಿಸಿದ್ದಾರೆ. ಅದರಲ್ಲಿ ಯಶ ಕಾಣಲು ತೆರಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ ಬಿಗ್ ಬಜೆಟ್ ನ ಸಿನಿಮಾಗಳಾದ ಕಾಲಾ ಮತ್ತು 2.0 ಸಿನಿಮಾ ತೆರೆಕಾಣಲು ಸಿದ್ಧವಾಗಿದೆ.
ರಜನಿಕಾಂತ್ ಅವರು ಧ್ಯಾನಕೇಂದ್ರದಲ್ಲಿ ಸಮಯ ಕಳೆಯಲಿದ್ದಾರೆ ಎಂದು ವರದಿ ಹೇಳಿದೆ. ಅಲ್ಲದೆ ಅವರು ಪುರಾತನ ಸ್ವಾಮೀಜಿ ಎಂದೇ ಹೇಳಲಾಗುತ್ತಿರುವ ಮಹಾವತಾರ್ ಬಾಬಾಜಿ ಅವರ ಗುಹೆಯತ್ತ ತೆರಳಿದ್ದಾರೆ ಎಂದು ವರದಿ ವಿವರಿಸಿದೆ.
ಹಿಮಾಲಯದ ಬುಡದಲ್ಲಿ ಭಾರತೀಯ ಯೋಗ ಸತ್ಸಂಗ ಸಮಾಜ ನೂರು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದಲ್ಲಿ ರಜನಿ ಪಾಲ್ಗೊಳ್ಳಲಿದ್ದಾರೆ. ಈ ಸಮಾಜವನ್ನು 1917ರಲ್ಲಿ ಪರಮಹಂಸ ಯೋಗಾನಂದ ಅವರು ಸ್ಥಾಪಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos