ದೇಶ

2018ರಲ್ಲಿ ಕಣಿವೆ ರಾಜ್ಯದಲ್ಲಿ 60 ಗಲಭೆ, ಭಯೋತ್ಪಾದಕ ಕೃತ್ಯಗಳು; 17 ಉಗ್ರರ ಹತ್ಯೆ

Srinivasamurthy VN
ನವದೆಹಲಿ: 2018ರಲ್ಲಿ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 60 ಗಲಭೆ ಹಾಗೂ ಭಯೋತ್ಪಾದಕ ಹಿಂಸಾಕೃತ್ಯಗಳು ನಡೆದಿದ್ದು, ಈ ಪೈಕಿ ಒಟ್ಟು 17 ಉಗ್ರರು ಹತರಾಗಿ, 15 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಇಂದು ಕೇಂದ್ರ ರಕ್ಷಣಾ ಸಚಿವಾಲಯ ಲೋಕಸಭೆಗೆ ಮಾಹಿತಿ ನೀಡಿದ್ದು, ಕೇಂದ್ರ ಗೃಹ ಸಚಿವಾಲಯದ ರಾಜ್ಯಸಚಿವ ಹಂಸರಾಜ್ ಗಂಗಾರಾಮ್ ಅಹಿರ್ ಅವರು ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ಅವರು, 2018ರ ಜನವರಿಯಿಂದ ಮಾರ್ಚ್ ತಿಂಗಳವರೆಗೂ ಕಣಿವೆ ರಾಜ್ಯದಲ್ಲಿ ಒಟ್ಟು 60 ಗಲಭೆ ಹಾಗೂ ಭಯೋತ್ಪಾದಕ ಹಿಂಸಾಕೃತ್ಯಗಳು ನಡೆದಿದ್ದು, ಈ ಘಟನೆಗಳಿಂದಾಗಿ ಒಟ್ಟು 17 ಉಗ್ರರು ಹತರಾಗಿದ್ದು, ಅಂತೆಯೇ 15 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ.
ಅಂತೆಯೇ ಈ ವರ್ಷ ಮಾರ್ಚ್ 4ರವರೆಗೂ ನಡೆದ ವಿವಿಧ ದಾಳಿಗಳಲ್ಲಿ 17 ಉಗ್ರರನ್ನು ಹತ್ಯೆ ಮಾಡಲಾಗಿದ್ದು, 15 ಸೈನಿಕರು ಹುತಾತ್ಮರಾಗಿದ್ದಾರೆ. ಅಂತೆಯೇ ಈ ದಾಳಿಗಳಲ್ಲಿ ಒಟ್ಟು ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ. ಮಾರ್ಚ್ 4ರವರೆಗಿನ ಅಂಕಿಅಂಶಗಳನ್ನು ಲೋಕಸಭೆಗೆ ನೀಡಿದ ಅಹಿರ್ ಅವರು, ಕಳೆದ ವರ್ಷ ಇಂತಹ 39 ಘಟನೆಗಳ ನಡೆದಿದ್ದವು. ಅಂತೆಯೇ ಇದೇ ಸಮಯದಲ್ಲಿ ಕಳೆದ ವರ್ಷ 26 ಉಗ್ರರು ಸಾವನ್ನಪ್ಪಿ, 10 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಅಲ್ಲದೆ ನಾಲ್ವರು ನಾಗರಿಕರು ಸಾವನ್ನಪ್ಪಿದ್ದರು ಎಂದು ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಅವರು, ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಾಯೋಜಿತ ಭಯೋತ್ಪಾದನೆಯಿಂದ ಸಾಕಷ್ಟು ಅನಾನುಕೂಲಗಳು ಸಂಭವಿಸುತ್ತಿದ್ದು, ಉಗ್ರರಿಗೆ ಗಡಿಯಾಚೆಗೆ ಆರ್ಥಿಕ ಮತ್ತು ಇತರೆ ನೆರವು ದೊರೆಯುತ್ತಿವೆ. ಗಡಿಯಾಚೆಗಿನ ನೆರವಿನಿಂದಾಗಿಯೇ ಉಗ್ರರ ಅಕ್ರಮ ಒಳನುಸುಳುವಿಕೆ ಹೆಚ್ಚಾಗುತ್ತಿದೆ. ಜನವರಿ ಒಂದೇ ತಿಂಗಳಲ್ಲಿ ಇಂತಹ ಸುಮಾರು 16 ಪ್ರಯತ್ನಗಳು ನಡೆದಿದ್ದು, ಈ ಪೈಕಿ ಭದ್ರತಾ ಪಡೆಗಳು ನಾಲ್ಕು ಮಂದಿ ಉಗ್ರರನ್ನು ಸದೆಬಡೆದಿದೆ ಎಂದು ಹೇಳಿದರು.
ಎರಡೇ ತಿಂಗಳಲ್ಲಿ 633 ಬಾರಿ ಕದನವಿರಾಮ ಉಲ್ಲಂಘಿಸಿದ ಪಾಕ್ ಸೇನೆ
ಇದೇ ವೇಳೆ ಪಾಕಿಸ್ತಾನ ಸೇನೆ ವಿರುದ್ಧ ಕಿಡಿಕಾರಿದ ಅಹಿರ್ ಅವರು, 2018ರಲ್ಲಿ ಕೇವಲ 2 ತಿಂಗಳ ಅವಧಿಯಲ್ಲಿ ಪಾಕಿಸ್ತಾನ ಸೇನೆ ಬರೊಬ್ಬರಿ 633 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಇದರಿಂದಾಗಿ ಒಟ್ಟು 10 ಸೈನಿಕರು ಹುತಾತ್ಮರಾಗಿದ್ದು, 12 ನಾಗರಿಕರು ಕೂಡ ಸಾವನ್ನಪ್ಪಿದ್ದಾರೆ. ಎಲ್ ಒಸಿ ಒಂದರಲ್ಲೇ 432 ಕದನ ವಿರಾಮ ಉಲ್ಲಂಘನೆ ಪ್ರಕರಣಗಳು ನಡೆದಿದ್ದು, ಅಂತಾರಾಷ್ಟ್ರೀಯ ಗಡಿಯಲ್ಲಿ 201 ಪ್ರಕರಣಗಳು ನಡೆದಿವೆ. 2017ರಲ್ಲಿ ಎಲ್ ಒಸಿಯಲ್ಲಿ 860 ಕದನವಿರಾಮ ಉಲ್ಲಂಘನೆ ಪ್ರಕರಣ ದಾಖಲಾಗಿತ್ತು. ಅಂತೆಯೇ 111 ಪ್ರಕರಣಗಳು ಅಂತಾರಾಷ್ಟ್ರೀಯ ಗಡಿಯಲ್ಲಿ ಸಂಭವಿಸಿತ್ತು ಎಂದು ಲಿಖಿತ ಮಾಹಿತಿ ನೀಡಿದ್ದಾರೆ.
SCROLL FOR NEXT