ಶ್ರೀನಗರ ಜೈಲಿನ ಮೇಲೆ ಎನ್ಐಎ ದಾಳಿ: ಪಾಕ್ ಧ್ವಜ ಸೇರಿ ಹಲವು ವಸ್ತುಗಳು ವಶಕ್ಕೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ ಕೇಂದ್ರೀಯ ಕಾರಾಗೃಹ ಉಗ್ರರ ಮುಖ್ಯಕಚೇರಿಯಾಗಿದ್ದು, ಉಗ್ರರ ನೇಮಕಾತಿ, ನಿಯೋಜನೆ ಇಲ್ಲಿಂದಲೇ ನಡೆಯುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ತನಿಖಾ ದಳದ ಅಧಿಕಾರಿಗಳು ಮಾಹಿದಿ ನೀಡಿದ್ದ ಕೆಲವೇ ದಿನಗಳಲ್ಲಿ ಎನ್ಐಎ ಅಧಿಕಾರಿಗಳು ಸೋಮವಾರ ಜೈಲಿನ ಮೇಲೆ ದಾಳಿ ನಡೆಸಿ ಪಾಕಿಸ್ತಾನದ ಧ್ವಜ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಶ್ರೀನಗರದ ಕೇಂದ್ರೀಯ ಕಾರಾಗೃಹದ ಮೇಲೆ ನಿನ್ನೆ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು, ಈ ವೇಳೆ ಪಾಕಿಸ್ತಾನ ಧ್ವಜ ಸೇರಿದಂತೆ 25ಕ್ಕೂ ಹೆಚ್ಚು ಮೊಬೈಲ್ ಫೋನ್ ಗಳು, ಜಿಹಾದಿ ಪುಸ್ತಕಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅಲ್ಲದೆ, ಹಲವು ಸಿಮ್ ಕಾರ್ಡ್ ಗಳು, 05 ಎಸ್'ಡಿ ಕಾರ್ಡ್ ಗಳು, 5 ಪೆನ್ ಡ್ರೈವ್ ಗಳು, ಐಪಾಡ್, ಹಿಜ್ಬುಲ್ ಉಗ್ರ ಸಂಘಟನೆಗೆ ಸೇರಿದ ಹಲವು ಪೋಸ್ಟರ್ ಗಳು ಸೇರಿದಂತೆ ಭಾರೀ ಪ್ರಮಾಣದ ವಸ್ತುಗಳು ಹಾಗೂ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಜೈಲಿನಲ್ಲಿ ನಿನ್ನೆ ಬೆಳಿಗ್ಗೆ ದಾಳಿ ನಡೆಸಿದ, ಶೋಧ ಕಾರ್ಯ ಆರಂಭಿಸಿದ್ದ ಅಧಿಕಾರಿಗಳು ಮಧ್ಯಾಹ್ನದವರೆಗೂ ಪರಿಶೀಲನೆಗಳನ್ನು ಮುಂದುವರೆಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರ ಕೇಂದ್ರೀಯ ಜೈಲು, ಉಗ್ರರ ನೇಮಕಾತಿಯ ತಾಣವಾಗಿರುವ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ಸಿಐಡಿ ಅಧಿಕಾರಿಗಳು ಕೆಲ ದಿನಗಳ ಹಿಂದಷ್ಟೇ ಎಚ್ಚರಿಕೆಯನ್ನು ನೀಡಿತ್ತು.
ಪರ್ಯಾಯ ಆಡಳಿತಾತ್ಮಕ ವ್ಯವಸ್ಥೆಯನ್ನೇ ಸ್ಥಾಪಿಸಿರುವ ಇಲ್ಲಿನ ಕೈದಿಗಳು, ಉಗ್ರರ ನೇಮಕಾತಿ ಚಟುವಟಿಕೆಗಳಲ್ಲಿ ನಿರತರಾದ ಬಗ್ಗೆ ಹಲವು ಮುನ್ನೆಚ್ಚರಿಕೆಯ ಹೊರತಾಗಿಯೂ ಇಲ್ಲಿನ ಪೊಲೀಸರು ಈ ಅಂಶವನ್ನು ನಿರ್ಲಕ್ಷಿಸಿದ್ದಾರೆ. ಒಳಗಿನಿಂದ ಒಪ್ಪಿಗೆ ಸಿಕ್ಕ ಬಳಿಕ ಮಾತ್ರ ಹೊಸ ಉಗ್ರನ ನೇಮಕ ಮಾಡಿಕೊಳ್ಳುವಷ್ಟರ ಮಟ್ಟಿಗೆ ಕೇಂದ್ರೀಯ ಜೈಲಿನ ಪಾತ್ರ ಮುಖ್ಯವಾಗಿದೆ. ಆದಾಗಿಯೂ ಇಂತಹ ಒಪ್ಪಿಗೆ ಯಾರು ನೀಡುತ್ತಾರೆಂಬ ಪರಿಶೀಲನೆ ನಡೆಯುತ್ತಿದೆ. ಆಡಳಿತ ವ್ಯವಸ್ಥೆಯಂತೆ, ಜೈಲಿನೊಳಗೆ ಕೈದಿಗಳದ್ದೂ ಪರ್ಯಾಯ ಆಡಳಿತ ವ್ಯವಸ್ಥೆಯಿದೆ ಎಂದು ಸಿಐಡಿ ಹೇಳಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos