ದೇಶ

’ದಿ ವೈರ್’ ವಿರುದ್ಧ ಜೈ ಶಾ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ

Raghavendra Adiga
ನವದೆಹಲಿ: ’ದಿ ವೈರ್’ ಹಾಗೂ ಅದರ ಸುದ್ದಿಗಾರರ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಪುತ್ರ ಜೈ ಶಾ ಗುಜರಾತಿನ ವಿಚಾರಣಾ ನ್ಯಾಯಾಲಯದಲ್ಲಿ ಹೂಡಿರುವ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಸುಪ್ರೀಂ ಕೋರ್ಟ್ ಇಂದು ತಡೆ ನೀಡಿದೆ.
ಗುಜರಾತ್ ನ್ಯಾಯಾಲಯವು ಏಪ್ರಿಲ್ 12 ರವರೆಗೆ ಮೊಕದ್ದಮೆ ಸಂಬಂಧ ವಿಚಾರಣೆ ನಡೆಸಬಾರದೆಂದು ಎಂದು ನ್ಯಾಯಾಲಯ ಆದೇಶಿಸಿದೆ.
ಇದೇ ವೇಳೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ಪೀಠವು ಪತ್ರಕರ್ತರ ವಿರುದ್ಧ ದೂರು ಸಲ್ಲಿಸಿದ್ದ ಜೈ ಶಾ ಹಾಗೂ ಇತರರಿಗೆ ಪತ್ರಕರ್ತರು ಸಲ್ಲಿಸಿದ್ದ ಮನವಿಗೆ ಎರಡು ವಾರದಲ್ಲಿ ಉತ್ತರಿಸುವಂತೆ ಹೇಳಿದೆ. 
ಗುಜರಾತ್ ವಿಚಾರನಾ ನ್ಯಾಯಾಲಯವು ತಾನು ಪತ್ರಕರ್ತರ ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ನಿರ್ಧಾರವನ್ನು ಪ್ರಶ್ನಿಸಿ ಪತ್ರಕರ್ತರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. 
ಮಾದ್ಯಮವು ಹೆಚ್ಚು ಜವಾಬ್ದಾರಿಯುತವಾಗಿರಬೇಕು. ಅದು ಯಾರ ಬಗೆಗೆ ತಾನೇನು ಕಲ್ಪಿಸಿಕೊಳ್ಳುತ್ತೇನೋ ಅದನ್ನು ಬರೆಯುವಂತಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ತಾವು ಈ ಹಿಂದೆ ನಡೆದ ಘಟನೆಗಳ ಬಗೆಗೆ ಹೇಳುತ್ತಿಲ್ಲ ಎಂದು ಒತ್ತಿ ಹೇಳಿದ ಮುಖ್ಯ ನ್ಯಾಯಮೂರ್ತಿ ಮಿಶ್ರಾ ಕೆಲವೊಮ್ಮೆ ಪತ್ರಿಕೆಗಳು ’ನ್ಯಾಯಾಲಯದ ತಿರಸ್ಕಾರಕ್ಕೆ ಪಾತ್ರವಾಗುವಂತೆ’ ಬರೆಯುತ್ತಾರೆ ಎಂದು ಹೇಳಿದರು.
"ಮಾದ್ಯಮ, ಅಭಿವ್ಯಕ್ತಿ ಸ್ವಾತಂತ್ರದ ಕುರಿತಂತೆ ನಾನು ಈ ಹಿಂದೆ ಸಾಕಷ್ಟು ಸಲ ಹೇಳಿದ್ದೇನೆ. ನಾವು ಮಾದ್ಯಮವನ್ನು ಹತ್ತಿಕ್ಕಲು ಬಯಸುವುದಿಲ್ಲ. ಆದರೆ ಎಲ್ಲವಕ್ಕೂ ಕೆಲ ಮಿತಿಗಳಿವೆ. ಯಾರೊಬ್ಬರ ಬಗೆಗೆ ನಾವೇನು ಯೋಚಿಸುತ್ತೇವೆಯೋ ಅದನ್ನೇ ಬರೆಯುವುದಲ್ಲ. ಇಲ್ಲಿ ಕೆಲ ಪರಿಮಿತಿಗಳಿಗೆ ಒಳಪಟ್ಟು ಬರೆಯಬೇಕು." ಅವರು ಹೇಳಿದ್ದಾರೆ.
ಜೈ ಶಾ ಅವರ ಸಂಸ್ಥೆಯೊಂದರ ಬಗೆಗೆ ’ದಿ ವೈರ್’ ಪ್ರಕಟಿಸಿದ್ದ ಲೇಖನವೊಂದರ ವಿರುದ್ಧ ಶಾ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಮೊಕದ್ದಮೆಯನ್ನು ವಜಾಗೊಳಿಸುವಂತೆ ಕೋರಿ ವೈರ್ ನ ಪತ್ರಕರ್ತರು ಗುಜರಾತ್ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಜ.8ರಂದು ನ್ಯಾಯಾಲಯವು ಪತ್ರಕರ್ತರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ತಿರಸ್ಕರಿಸಿತ್ತು.
SCROLL FOR NEXT