ದೇಶ

ಎಐಎಡಿಎಂಕೆ, ಟಿಡಿಪಿ ಸದಸ್ಯರಿಂದ ಅಡ್ಡಿ : ಲೋಕಸಭೆ, ರಾಜ್ಯಸಭೆ ಕಲಾಪ ನಾಳೆಗೆ ಮುಂದೂಡಿಕೆ

Nagaraja AB

ನವದೆಹಲಿ : ಸಂಸತ್ತಿನ ಉಭಯ ಸದನಗಳಲ್ಲಿ ಇಂದೂ ಕೂಡಾ ತಮಿಳುನಾಡಿನ ಎಐಎಡಿಎಂಕೆ ಸದಸ್ಯರು ಹಾಗೂ ಟಿಡಿಪಿ ಸದಸ್ಯರು ತಮ್ಮ ಬೇಡಿಕೆ ಈಡೇರಿಕೆಗಾಗಿ  ಭಾರೀ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಸುಗಮ ಕಲಾಪ ಸಾಧ್ಯವಾಗದೆ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

 ಬೆಳಿಗ್ಗೆ ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಹಾಗೂ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಕ್ರಮವಾಗಿ ತಮಿಳುನಾಡಿನ ಎಐಎಡಿಎಂಕೆ ಹಾಗೂ ಆಂಧ್ರಪ್ರದೇಶದ ಟಿಡಿಪಿ ಸದಸ್ಯರು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಇದರಿಂದಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ಕಲಾಪವನ್ನು ಮಧ್ಯಾಹ್ನ 12 ಗಂಟೆಯವರೆಗೂ ಮುಂದೂಡಿದ್ದರು. ಬಳಿಕ ಸಮಾವೇಶಗೊಂಡಾಗಲೂ ಸುಗಮ ಕಲಾಪ ಸಾಧ್ಯವಾಗದೇ ಸ್ಪೀಕರ್ ಸುಮಿತ್ರಾ ಮಹಾಜನ್ ನಾಳೆಗೆ ಕಲಾಪವನ್ನು ಮುಂದೂಡಿದರು.

ಇತ್ತ ರಾಜ್ಯಸಭೆಯಲ್ಲಿಯೂ ಎಐಎಡಿಎಂಕೆ ಹಾಗೂ ಟಿಡಿಪಿ ಸದಸ್ಯರು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿದರು.

15 ನಿಮಿಷಗಳ ಕಾಲ ಕಲಾಪ ಮುಂದೂಡಿದ ಸಭಾಪತಿ ಎಂ. ವೆಂಕಯ್ಯನಾಯ್ಡು. ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡರು. ಆದಾಗ್ಯೂ, ಎಐಎಡಿಎಂಕೆ ಸದಸ್ಯರು ಎದ್ದುನಿಂತು  ಪ್ರಧಾನಿ ನರೇಂದ್ರಮೋದಿ ಅವರ ಮಧ್ಯಪ್ರವೇಶಕ್ಕೆ ಆಗ್ರಹಿಸಿದರು.

ಎಐಡಿಎಂಕೆ ಸದಸ್ಯರನ್ನು ಮನವೊಲಿಸುವಲ್ಲಿ ವಿಫಲರಾದ ಸಭಾಪತಿ ಎಂ. ವೆಂಕಯ್ಯನಾಯ್ಡು ದಿನದ ಮಟ್ಟಿಗೆ ಕಲಾಪ ಮುಂದೂಡಿದ್ದರು. ಹಠಾತ್ ಕಲಾಪ ಮುಂದೂಡಿದ್ದ ಬಗ್ಗೆ ಪ್ರತಿಪಕ್ಷಗಳ ನಾಯಕರು ಕುತೂಹಲ ವ್ಯಕ್ತಪಡಿಸಿದ್ದಾರೆ.

ಪ್ರತಿಪಕ್ಷಗಳ ನಾನಾ ವಿಷಯಗಳಿಗೆ ಸಂಬಂಧಿಸಿದಂತೆ ಮಾರ್ಚ್ 5 ರಂದು ಆರಂಭವಾದ ಬಜೆಟ್ ಅಧಿವೇಶನದ ಎರಡನೇ ಹಂತದಲ್ಲಿ ಯಾವುದೇ ಚರ್ಚೆಯಾಗದೆ ಕೋಲಾಹಲ, ಗದ್ಧಲ, ಪ್ರತಿಭಟನೆಗಳ ಮಧ್ಯೆಯೇ ಕಲಾಪ ವ್ಯರ್ಥವಾಗುತ್ತಿದೆ

SCROLL FOR NEXT