ಕೋಲ್ಕತ್ತಾ: ಪಶ್ಚಿಮ ಬಂಗಾಳ ಪಂಚಾಯತಿ ಚುನಾವಣೆಗೆ ನಾಮಪತ್ರ ಸಲ್ಲಿಕೆಗಾಗಿ ಒಂದು ದಿನದ ಅವಧಿ ವಿಸ್ತರಣೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕೋಲ್ಕತ್ತಾ ಹೈಕೋರ್ಟ್ ವಜಾಗೊಳಿಸಿದೆ.
ಚುನಾವಣಾ ಆಯೋಗದ ನಿರ್ಧಾರದ ಬಗ್ಗೆ ನಾನು ಮಧ್ಯಪ್ರವೇಶ ಮಾಡುವುದಿಲ್ಲ ಎಂದಿರುವ ನ್ಯಾಯಾಲಯ ಅರ್ಜಿಯಲ್ಲಿ ಚುನಾವಣೆಗೆ ಸಂಬಂಧಿಸಿದ ಎಲ್ಲಾ ದಿನಾಂಕಗಳನ್ನೂ ಉಲ್ಲೇಖಿಸಿಲ್ಲ ಏಕೆ ಎಂದು ಪ್ರಶ್ನಿಸಿದೆ. ಅಸ್ತಿತ್ವದಲ್ಲಿರುವ ಪಂಚಾಯತ್ ಚುನಾವಣಾ ಕಾನೂನಿಗೆ ಇದು ಹೊಂದಿಕೆಯಾಗುತ್ತಿಲ್ಲ ಎಂದು ಹೇಳಿದ್ದ ನ್ಯಾಯಾಲಯ ತಾನು ಆಯೋಗದ ನಿರ್ಧಾರದಲ್ಲಿ ಮೂಗು ತೂರಿಸುವುದಿಲ್ಲ ಎಂದಿದೆ.
ಕಾಂಗ್ರೆಸ್ ನಾಯಕ ಮತ್ತು ವಕೀಲ ರಿಟ್ಜು ಘೋಷಲ್ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಇಷ್ಟಾಗಿಯೂ ಚುನಾವಣೆಗಳು ಸರಿಯಾದ ಸಮಯಕ್ಕೆ ಮುಗಿಯಬೇಕ್ಯು ಎಂದು ಅಭಿಪ್ರಾಯ ಪಟ್ಟಿರುವ ನ್ಯಾಯಪೀಠ "ಇದು ನಾನು ಆಯೋಗಕ್ಕೆ ನೀಡುತ್ತಿರುವ ವೇಕ್ ಅಪ್ ಕಾಲ್" ಎಂದಿದೆ.
ಪಂಚಾಯತ್ ಚುನಾವಣೆ ಫಲಿತಾಂಶದ ದಿನಾಂಕವನ್ನೂ ಘೋಷಿಸದ ಪಶ್ಚಿಮ ಬಂಗಾಳ ರಾಜ್ಯ ಚುನಾವಣಾ ಆಯೋಗವು ಏ.21ರಂದು ನಾಮನಿರ್ದೇಶನ, ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯುವಿಕೆ ದಿನಾಂಕಗಳನ್ನು ಪ್ರಕಟಿಸಿ ಅಧಿಸೂಚನೆ ಹೊರಡಿಸಿತ್ತು.
ಏತನ್ಮಧ್ಯೆ ಇದನ್ನು ಪ್ರಶ್ನಿಸಿ ರಾಜ್ಯದ ವಿರೋಧ ಪಕ್ಷಗಳ ಪ್ರಮುಖರು ಸಲ್ಲಿಸಿದ ಅರ್ಜಿಗಳು ಕೋಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠದಡಿ ವಿಚಾರಣೆಗೆ ಬರಬೇಕಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos