ನವದೆಹಲಿ: ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಪದಚ್ಯುತಿಗೆ ಪಟ್ಟು ಹಿಡಿರುವ ಕಾಂಗ್ರೆಸ್ ಬಗ್ಗೆ ವಿತ್ತ ಸಚಿವ ಅರುಣ್ ಜೇಟ್ಲಿ ಪ್ರತಿಕ್ರಿಯೆ ನೀಡಿದ್ದು, ತೀವ್ರವಾದ ನಿಲುವನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಸಮಸ್ಯೆಯಲ್ಲಿಯೂ ಲಾಭ ಪಡೆಯುವುದರ ಬಗ್ಗೆ ಚಿಂತಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಸಿಜೆಐ ಕುರಿತ ಕಾಂಗ್ರೆಸ್ ಪಕ್ಷದ ನಿಲುವು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಆ ಪಕ್ಷಕ್ಕೇ ಮುಳುವಾಗಲಿದೆ ಎಂದು ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ. ಸಿಜೆಐ ಪದಚ್ಯುತಿ ನಿರ್ಣಯವನ್ನು ತಿರಸ್ಕರಿಸಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಇಬ್ಬರು ಕಾಂಗ್ರೆಸ್ ನಾಯಕರು ಈಗಾಗಲೇ ವಾಪಸ್ ಪಡೆದಿದ್ದಾರೆ.
ನ್ಯಾಯಾಲಯದಲ್ಲಿ ಉಂಟಾಗಿರುವ ಸಮಸ್ಯೆಯಿಂದಲೂ ಕಾಂಗ್ರೆಸ್ ತನಗೆ ಏನು ಲಾಭವಾಗಲಿದೆ ಎಂಬುದನ್ನು ಚಿಂತಿಸುತ್ತಿದೆ ಎಂದು ಫೇಸ್ ಬುಕ್ ನಲ್ಲಿ ಅರುಣ್ ಜೇಟ್ಲಿ ಹೇಳಿದ್ದಾರೆ. ರಾಜ್ಯಸಭೆಯ ಅಧ್ಯಕ್ಷರು ಯಾವುದೇ ನಿಲುವಳಿ ಸೂಚನೆಯನ್ನು ಅಂಗೀಕರಿಸುವುದು ಅಥವಾ ಬಿಡುವುದು ನ್ಯಾಯಾಲಯದ ಪರಿಶೀಲನೆಗೆ ಒಳಪಡದ ವಿಷಯವಾಗಿದೆ. ಆದರೆ ಕಾಂಗ್ರೆಸ್ ಮಾತ್ರ ವೆಂಕಯ್ಯ ನಾಯ್ಡು ಅವರ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಮೂಲಕ ನ್ಯಾಯಾಂಗದಲ್ಲಿ ಉಂಟಾಗಿರುವ ಬಿರುಕಿನಿಂದಲೂ ಲಾಭ ಗಳಿಸಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಜೇಟ್ಲಿ ಆರೋಪಿಸಿದ್ದಾರೆ.