ದೇಶ

ಕಾರ್ತಿ ಚಿದಂಬರಂ ವಿದೇಶ ಪ್ರವಾಸಕ್ಕೆ ಸುಪ್ರೀಂ ಕೋರ್ಟ್ ಷರತ್ತುಬದ್ದ ಒಪ್ಪಿಗೆ

Raghavendra Adiga
ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರು ಕೆಲವು ನಿಬಂಧನೆಗೆ ಒಳಪಟ್ಟು ವಿದೇಶಕ್ಕೆ ತೆರಳಬಹುದು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ.
ಕಾರ್ತಿ ಚಿದಂಬರಂ ಯುಕೆ, ಜರ್ಮನಿ ಹಾಗೂ ಸ್ಪೇನ್ ದೇಶಕ್ಕೆ ಮೇ 19 ರಿಂದ 27 ರ ನಡುವೆ ಪ್ರಯಾಣಿಸಲು ಅಡ್ಡಿ ಇಲ್ಲ ಆದರೆ ಕಾರ್ತಿ ಯಾವುದೇ ವಿದೇಶಿ ಬ್ಯಾಂಕ್ ಖಾತೆಯನ್ನು ತೆರೆಯಲು ಅಥವಾ ಮುಚ್ಚಲು ಅನುಮತಿ ಇಲ್ಲ. ವಿದೇಶದಲ್ಲಿ ಯಾವುದೇ ಆಸ್ತಿ ವ್ಯವಹಾರಕ್ಕೆ ಕೈ ಹಾಕುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರನ್ನೊಳಗೊಂಡ ಪೀಠ ಆದೇಶಿಸಿದೆ.
ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಕಾರ್ತಿ ಚಿದಂಬರಂ ಮೇಲೆ ಅನೇಕ ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸುತ್ತಿದೆ. ಐಎನ್ಎಕ್ಸ್ ಮೀಡಿಯಾ, ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣ, ಅಕ್ರಮ ಹಣ ವರ್ಗಾವಣೆ ಆರೋಪಗಳೂ  ಇದರಲ್ಲಿ ಸೇರಿದೆ.
ಕಾರ್ತಿ ವಿದೇಶ ಪ್ರವಾಸಕ್ಕೆ ತೆರಳುವದಕ್ಕೆ ಅಡ್ಡಿ ಇಲ್ಲ ಆದರೆ ಅವರು ನ್ಯಾಯಾಲಯದ ಆದೇಶ, ನಿರ್ಬಂಧಗಳನ್ನು ಮೀರುವಂತಿಲ್ಲ. ಅವರು ಭಾರತಕ್ಕೆ ಹಿಂತಿರುಗುವ ದಿನಾಂಕ ಹಾಗೂ ವಿಮಾನ ಪ್ರಯಾಣದ ವಿವರಗಳನ್ನು ನ್ಯಾಯಾಲಯಕ್ಕೆ ತಿಳಿಸಬೇಕಿದೆ.
ಕಾರ್ತಿ ಇಡಿ ತನಿಖೆಗೆ ಸಹಕರಿಸಬೇಕು. ಭಾರತಕ್ಕೆ ಹಿಂತಿರುಗಿದ ಬಳಿಕ ಅವರು ತಮ್ಮ ಪಾಸ್ ಪೋರ್ಟ್ ನ್ನು ಇಡಿ ವಶಕ್ಕೆ ನಿಡಬೇಕು ಎಂದು ನ್ಯಾಯಾಲಯ ಹೇಳಿದೆ.
SCROLL FOR NEXT