ತಿರುವನಂತಪುರಂ: ಕೇರಳದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ನಿಪಾಹ್ ವೈರಾಣು ಸೋಂಕಿಗೆ ಮತ್ತೆರಡು ಬಲಿಯಾಗಿದ್ದು, ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ನಿನ್ನೆ ಸಂಜೆ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತಿಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ನಿಪಾಹ್ ವೈರಾಣು ಸೊಂಕಿಗೆ ಈ ವರೆಗೂ ಬಲಿಯಾದವರ ಸಂಖ್ಯೆ 10ಕ್ಕೆ ಏರಿಕೆಯಾಗಿದ್ದು, ಅಂತೆಯೇ ಸುಮಾರು 50 ಜನರಲ್ಲಿ ನಿಪಾಹ್ ವೈರಾಣು ಸೋಂಕು ಕಾಣಿಸಿಕೊಂಡಿದೆ. ಸೋಂಕು ಪೀಡಿತರೆಲ್ಲರನ್ನೂ ಪ್ರತ್ಯೇಕ ಕೊಠಡಿಯಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆ ನೀಡುತ್ತಿರುವ ದಾದಿಯರು ಮತ್ತು ವೈದ್ಯರಿಗೂ ವಿಶೇಷ ಔಷಧ ಸಲಕರಣೆಗಳನ್ನು ಒದಗಿಸಲಾಗಿದೆ.
ನಿನ್ನೆಯಷ್ಟೇ ಪೆರಂಬ್ರಾ ತಾಲೂಕಿನಲ್ಲಿ ನಿಪಾಹ್ ವೈರಾಣು ಸೊಂಕು ಪೀಡಿತರಿಗೆ ಚಿಕಿತ್ಸೆ ನೀಡುತ್ತಿದ್ದ ದಾದಿಗೂ ವೈರಾಣು ಸೋಂಕಿ ಆಕೆ ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ವೈದ್ಯರಿಗೆ ಮತ್ತು ದಾದಿಯರಿಗೆ ವಿಶೇಷ ಸಲಕರಣೆಗಳನ್ನು ನೀಡಲಾಗಿದೆ ಎಂದು ಸ್ಥಳೀಯ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಈ ಮಾರಕ ನಿಪಾ ವೈರಾಣು ಹಣ್ಣುಗಳನ್ನು ತಿನ್ನುವ ಬಾವಲಿಗಳ ಮೂಲಕ ಪ್ರಾಣಿಗಳಲ್ಲಿ ಹರಡಿ ಅಲ್ಲಿಂದ ಮಾನವರಿಗೆ ಹರಡುತ್ತದೆ. ಈ ಬಾವಲಿಗಳ ಮೂತ್ರ, ಜೊಲ್ಲು, ವಾಂತಿಯ ನೇರ ಮತ್ತು ಪರೋಕ್ಷ ಸ್ಪರ್ಶದಿಂದಲೂ ಈ ವೈರಾಣು ಹಬ್ಬುವ ಸಾಧ್ಯತೆ ಇದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. 1998ರಲ್ಲಿ ಮಲೇಷ್ಯಾದ ಸಿಂಗಾಪುರದಲ್ಲಿ ಕಾಣಿಸಿಕೊಂಡಿದ್ದ ಈ ವೈರಾಣು ಬಳಿಕ 2001ರಲ್ಲಿ ಕಾಣಿಸಿಕೊಂಡಿತ್ತು. ಆರು ವರ್ಷಗಳ ಬಳಿಕ ಎರಡು ಬಾರಿ ಕಾಣಿಸಿಕೊಂಡಿದ್ದ ಈ ಸೋಂಕಿನಿಂದಾಗಿ ಕೇರಳದಲ್ಲಿ 50 ಮಂದಿ ಸಾವನ್ನಪ್ಪಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos