ನವದೆಹಲಿ; ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಅವರಿಗೆ ಜು.3 ವರೆಗೂ ಸಿಬಿಐ ಬಂಧನದಿಂದ ವಿನಾಯಿತಿಯನ್ನು ದೆಹಲಿ ನ್ಯಾಯಾಲಯ ಗುರುವಾರ ನೀಡಿದೆ.
ರೂ.3,500 ಕೋಟಿ ಮೊತ್ತದ ಏರ್'ಸೆಲ್ ಮ್ಯಾಕ್ಸಿಸ್ ಮತ್ತು ರೂ.305 ಕೋಟಿ ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಎರಡೂ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ನಿನ್ನೆಯಷ್ಟೇ ನ್ಯಾಯಾಲಯದ ಮೊರೆ ಹೋಗಿದ್ದರು.
ಇದರಂತೆ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎ.ಕೆ.ಪಥಕ್ ಅವರು, ಜು.3ರವರೆಗೂ ಬಂಧನದಿಂದ ವಿನಾಯಿತಿ ನೀಡಿದ್ದು, ಚಿದಂಬರಂ ವಿರುದ್ಧ ಯಾವುದೇ ರೀತಿಯ ಒತ್ತಾಯಪೂರ್ವಕ ಕ್ರಮಗಳನ್ನು ಕೈಗೊಳ್ಳದಂತೆ ಸಿಬಿಐಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಾಲಯ ಜೂ.5 ರಂದು ವಿಚಾರಣೆಗೆ ಹಾಜರಾಗುವಂತೆ ಚಿದಂಬರಂಗೆ ಸೂಚಿಸಿತ್ತು. ಜೊತೆಗೆ ಜೂ.5ರವರೆಗೆ ಚಿದಂಬರಂ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಜಾರಿ ನಿರ್ದೇಶನಾಲಯಕ್ಕೆ ಸೂಚನೆ ನೀಡಿತ್ತು.