ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟದಿಂದ ಹೊರಬಂದಿರುವ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿರುವುದಕ್ಕೆ ತೆಲುಗು ದೇಶಂ ಪಕ್ಷದ ಸಂಸ್ಥಾಪಕ ಮತ್ತು ದಿವಂಗತ ಮಾಜಿ ಸಿಎಂ ಎನ್ ಟಿ ರಾಮರಾವ್ ಅವರ ಪತ್ನಿ ಲಕ್ಷ್ಮೀ ಪಾರ್ವತಿ ವಿರೋಧ ವ್ಯಕ್ತಪಡಿಸಿದ್ದಾರೆ.
ತೆಲುಗು ಮಣ್ಣಿನ ಮಕ್ಕಳ ಮಾನ ಹರಾಜು ಹಾಕಲು ಚಂದ್ರಬಾಬು ನಾಯ್ಡು ಹೊರಟಿದ್ದಾರೆ. ಹೀಗಾಗಿ ತೆಲುಗು ಭಾಷಿಕರ ಸ್ವಾಭಿಮಾನವನ್ನು ಕಾಪಾಡಲು ಎನ್ ಟಿ ರಾಮರಾವ್ ಅವರು ಮತ್ತೊಮ್ಮೆ ಜನ್ಮ ತಾಳಿ ಬರಬೇಕಿದೆ ಎಂದು ಹೇಳಿದ್ದಾರೆ.
ಮಾಜಿ ಸಿಎಂ ಎನ್ಟಿಆರ್ ಅವರ ಸಮಾಧಿ ಬಳಿ ತೆರಳಿದ ಲಕ್ಷ್ಮೀ ಪಾರ್ವತಿ ಅವರು ಅಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸಮಾಧಿ ಮುಂದೆ ಕಾಗದಗಳನ್ನಿಟ್ಟು ಮತ್ತೆ ಹುಟ್ಟಿ ಬನ್ನಿ ಎಂದು ನಂದಮೂರಿ ತಾರಕ ರಾಮರಾವ್ ರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಎರಡು ದಿನಗಳ ಹಿಂದೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜತೆಗೆ ಮಾತುಕತೆ ನಡೆಸಿ ಕಾಂಗ್ರೆಸ್ ನೊಂದಿಗೆ ಟಿಡಿಪಿ ಮೈತ್ರಿ ಮಾಡಿಕೊಂಡಿರುವುದಾಗಿ ಪ್ರಕಟಿಸಿದ್ದರು.