ಸಾರ್ವಜನಿಕ ಹಿತಾಸಕ್ತಿ ಅಂದ್ರೆ ಏನು ಗೊತ್ತಾ?: ಸರ್ಕಾರಕ್ಕೆ ಆರ್ ಬಿಐ ಪಾಠ!
ಮುಂಬೈ: ನಾನ್ ಪರ್ಫಾರ್ಮಿಂಗ್ ಅಸೆಟ್ಸ್ (ಎನ್ ಪಿಎ)ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ-ಆರ್ ಬಿಐ ನಡುವಿನ ಸಮರ ಮುಂದುವರೆದಿದ್ದು, ನಿರ್ದೇಶನ ನೀಡಲು ಮುಂದಾಗಿದ್ದ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ಮತ್ತೊಮ್ಮೆ ಪಾಠ ಮಾಡಿದೆ.
ಈ ಬಾರಿ ಸಾರ್ವಜನಿಕ ಹಿತಾಸಕ್ತಿಯನ್ನು ವ್ಯಾಖ್ಯಾನಿಸಿರುವ ಆರ್ ಬಿಐ, ಠೇವಣಿದಾರರು, ತೆರಿಗೆದಾರರನ್ನು ರಕ್ಷಿಸುವುದೇ ಸಾರ್ವಜನಿಕ ಹಿತಾಸಕ್ತಿ ಎಂದು ಹೇಳಿದೆ. ಆರ್ ಬಿಐ ನ ಉಪ ಗೌರ್ನರ್ ಎನ್ಎಸ್ ವಿಶ್ವನಾಥನ್ ಈ ಬಗ್ಗೆ ಮಾತನಾಡಿದ್ದು, ಸಾಲ ವಾಪಸ್ ಪಡೆಯುವುದಕ್ಕೆ ಬ್ಯಾಂಕ್ ಗಳು ಮುಂದಾಗಿವೆ ಎಂದರೆ ಅದು ಬ್ಯಾಂಕ್ ಗಳು ಠೇವಣಿದಾರರು ಹಾಗೂ ತೆರಿಗೆದಾರರ ಹಣ ವಾಪಸ್ ಪಡೆಯುವುದಕ್ಕೆ ಯತ್ನಿಸುತ್ತಿದೆ ಎಂಬುದು ಅದಕ್ಕೆ ಅರ್ಥ. ಹಾಗೆಂದ ಮಾತ್ರಕ್ಕೆ ಅದನ್ನು ನಿರ್ದಯ ಕೇಂದ್ರೀಯ ಬ್ಯಾಂಕ್-ನಿಸ್ಸಹಾಯಕ ಸಾಲಗಾರ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
2,000 ಕೋಟಿ ರೂಪಾಯಿಗೂ ಹೆಚ್ಚು ಸಾಲ ಪಡೆದು ಸುಸ್ತಿದಾರರಾಗುವ ಹಂತ ತಲುಪಿರುವವರಿಂದ ಸಾಲ ವಾಪಸ್ ಪಡೆಯುವ ಪ್ರಕ್ರಿಯೆ ಪ್ರಾರಂಭಿಸಲು ಆರ್ ಬಿಐ ಕ್ರಮ ಕೈಗೊಂಡಿತ್ತು. ಆದರೆ ಈ ಬಗ್ಗೆ ಆರ್ ಬಿಐ ಗೆ ನಿರ್ದೇಶನ ನೀಡಲು ಮುಂದಾಗಿದ್ದ ಕೇಂದ್ರ ಸರ್ಕಾರ, ಸಾಲ ಪಡೆದಿರುವ ಬೇರೆ ಕ್ಷೇತ್ರಗಳ ಉದ್ಯಮಿಗಳಿಗಿಂತ ವಿದ್ಯುತ್ ಉತ್ಪಾದಕರ ಕ್ಷೇತ್ರ ಭಿನ್ನವಾದದ್ದು, ವಿದ್ಯುತ್ ಉತ್ಪಾದಕ ಕ್ಷೇತ್ರದಲ್ಲಿರುವವರು ಸುಸ್ತಿದಾರರಾಗುವುದಕ್ಕೆ ಪ್ರಮೋಟರ್ ಗಳ ನಿಯಂತ್ರಣವನ್ನೂ ಮೀರಿ ಹಲವು ಅಂಶಗಳಿರುತ್ತವೆ. ಆದ್ದರಿಂದ ಕೆಲವು ವಿನಾಯಿತಿ ನೀಡಬೇಕೆಂದು ಆರ್ ಬಿಐ ಗೆ ನಿರ್ದೇಶನ ನೀಡಲು ಕೇಂದ್ರ ಸರ್ಕಾರ ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಆರ್ ಬಿಐ- ಕೇಂದ್ರ ಸರ್ಕಾರದ ನಡುವಿನ ತಿಕ್ಕಾಟ ತಾರಕಕ್ಕೇರಿತ್ತು. ಸ್ಪಷ್ಟನೆಯನ್ನೂ ನೀಡಿದ್ದ ಕೇಂದ್ರ ಸರ್ಕಾರ ಆರ್ ಬಿಐ ನ ಸ್ವಾಯತ್ತತೆಯನ್ನು ಸರ್ಕಾರ ಎಂದಿಗೂ ಗೌರವಿಸಿ ಪಾಲಿಸುತ್ತಿದೆ. ಎರಡೂ ಸಂಸ್ಥೆಗಳು ಸಾರ್ವಜನಿಕ ಹಿತಾಸಕ್ತಿಯನ್ನೇ ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿವೆ ಎಂದು ಹಣಕಾಸು ಸಚಿವಾಲಯ ಆರ್ ಬಿಐ ಆಕ್ಷೇಪಣೆಗಳಿಗೆ ಸ್ಪಷ್ಟನೆ ನೀಡಿತ್ತು.
ಈಗ, ಠೇವಣಿದಾರರು, ತೆರಿಗೆದಾರರನ್ನು ರಕ್ಷಿಸುವುದಕ್ಕೆ ಸಾರ್ವಜನಿಕ ಹಿತಾಸಕ್ತಿ ಎನ್ನುತ್ತಾರೆ ಎಂದು ಆರ್ ಬಿಐ ಗೌರ್ನರ್ ವಿಶ್ವನಾಥನ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos