ತಿರುವನಂತಪುರ: ಶಬರಿಮಲೆ ದೇಗುಲ ವಿಚಾರದಲ್ಲಿ ಬಿಜೆಪಿ, ಆರ್'ಎಸ್ಎಸ್ ಹಾಗೂ ಕೇರಳ ಸರ್ಕಾರ ರಾಜಕೀಯ ಮಾಡಬಾರದು, ದೇಗಲುವನ್ನು ಅಪವಿತ್ರಗೊಳಿಸಬಾರದು ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅವರು ಶುಕ್ರವಾರ ಹೇಳಿದ್ದಾರೆ.
ಶಬರಿಮಲೆ ಅತ್ಯಂತ ಪ್ರಮುಖ ವಿಚಾರವಾಗಿದ್ದು, ಈ ವಿಚಾರ ಸಾಂಪ್ರದಾಯಿಕ ಆಧುನಿಕತೆ ಮತ್ತು ಬದಲಾದ ಪ್ರಪಂಚದ ನಡುವಿನ ಅಂತರಗಳ ಕುರಿತು ಆಳವಾದ ಪ್ರಶ್ನೆಯನ್ನು ಹುಟ್ಟುಕಾಕುತ್ತದೆ. ಹಾಗಾಗಿ ಈ ವಿಚಾರವನ್ನು ಹಗುರವಾಗಿ ನೋಡಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಬಿಜೆಪಿ ಹಿಂಸಾಚಾರ ನಡವಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಪವಿತ್ರ ಸ್ಥಳವನ್ನು ರಾಜಕೀಯ ರಂಗವಾಗಿಸಿ ಬಿಜೆಪಿ ಮುಖ್ಯಸ್ಥರು ರಾಜಕೀಯ ಮಾಡುತ್ತಿದ್ದು, ಇದನ್ನು ತಮ್ಮ ಚಿನ್ನದಂತಹ ಅವಕಾಶವೆಂದು ತಿಳಿಯುತ್ತಿರುವುದು ನಿಜಕ್ಕೂ ನಾಚಿಕೆಗೇಡು ಎಂದು ಹೇಳಿದ್ದಾರೆ.
ಶಬರಿಮಲೆ ದೇಗುಲದಲ್ಲಿ ಅಹಿತಕರ ವಾತಾವರಣ ನಿರ್ಮಾಣಗೊಳ್ಳಲು ಇಲ್ಲಿನ ರಾಜ್ಯ ಸರ್ಕಾರ ಕೂಡ ಕಾರಣವಾಗಿದೆ. ಯಾರೊಂದಿಗೂ ಮಾತುಕತೆ ನಡೆಸದೆಯೇ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಆದೇಶವನ್ನು ಪಾಲನೆ ಮಾಡಲು ಮುಂದಾಗಿದ್ದು ತಪ್ಪು. ಶಬರಿಮಲೆ ದೇಗುವ ವಿಚಾರದಲ್ಲಿ ನಡೆಯುತ್ತಿರುವ ನಾಟಕದಲ್ಲಿ ರಾಜ್ಯ ಸರ್ಕಾರದ ಪಾತ್ರ ಕೂಡ ಇದೆ.
ಜನರ ನಂಬಿಕೆಗಳಿಗೆ ನಾವು ಗೌರವ ನೀಡಬೇಕು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು. ರಾಜಕೀಯ ನಾಟಕಗಳ ಬದಲಿಗೆ ಸಂಬಂಧಿಸಿದವರೊಂದಿಗೆ ವಿವಾದ ಕುರಿತು ಮಾತುಕತೆ ನಡೆಸಬೇಕು. ಶಬರಿಮಲೆ ಪವಿತ್ರ ಸ್ಥಳವಾಗಿದ್ದು, ಈ ಪವಿತ್ರ ಸ್ಥಳವನ್ನು ಅಪವಿತ್ರಗೊಳಿಸದಂತೆ ಬಿಜೆಪಿ ಹಾಗೂ ಆರ್'ಎಸ್ಎಸ್ ಇನ್ನಿತರರ ಬಳಿ ಮನವಿ ಮಾಡಿಕೊಳ್ಳುತ್ತೇನೆಂದು ತಿಳಿಸಿದ್ದಾರೆ.