ಮಾಜಿ ಕೇಂದ್ರ ಸಚಿವ ಶಶಿತರೂರ್
ನವದೆಹಲಿ: ಇಂದು ದೇಶಕ್ಕೆ ಓರ್ವ ಚಾಯ್ ವಾಲಾ ಪ್ರಧಾನಿಯಾಗಿದ್ದಾರೆ ಎಂದರೆ ಅದಕ್ಕೆ ಕಾರಣ ಚಾಚಾ ನೆಹರೂ ಎಂದು ಮಾಜಿ ಕೇಂದ್ರ ಸಚಿವ ಶಶಿತರೂರ್ ಹೇಳಿದ್ದಾರೆ.
ನೆಹರು ಜನ್ಮದಿನದಂದು ದೆಹಲಿಯಲ್ಲಿ ಆಯೋಜಿಸಿದ್ದ ತಮ್ಮ 'ನೆಹರೂ, ದಿ ಇನ್ವೆಂಷನ್ ಆಫ್ ಇಂಡಿಯಾ' ಪುಸ್ತಕ ಮರುಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ತರೂರ್, 'ಯಾವುದೇ ಭಾರತೀಯನೂ ಸಹ ಅತ್ಯುನ್ನತ ಮಟ್ಟಕ್ಕೆ ಏರಲು ಅವಕಾಶ ಇರುವ ಮಟ್ಟಿಗಿನ ಸಂಸ್ಥೆಗಳನ್ನು ಹಾಗೂ ವ್ಯವಸ್ಥೆಗಳನ್ನು ಚಾಚಾ ಜವಹರ್ ಲಾಲ್ ನೆಹರೂ ತಂದ ಕಾರಣ ಇಂದು ಚಾಯ್ವಾಲಾರಂಥವರು ಪ್ರಧಾನ ಮಂತ್ರಿಯಾಗಿದ್ದಾರೆ ಎಂದು ಹೇಳಿದ್ದಾರೆ.
'ನಾವಿಂದು ಮಾಡುತ್ತಿರುವ ಪ್ರತಿಯೊಂದಕ್ಕೂ ವೇದಿಕೆ ನಿರ್ಮಾಣ ಮಾಡಿಕೊಟ್ಟ ಭಾರತದ ಶ್ರೇಷ್ಠ ಪುತ್ರನ ವಿರುದ್ಧ ಇಂದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಕಡೆಗಣಿಸುವ ಕೆಲಸ ನಡೆಯುತ್ತಿದೆ. ಭಾರತ ಇಂದು ಮಂಗಳಯಾನದ ಕುರಿತು ಹೆಮ್ಮೆ ಪಡುತ್ತಿದೆ, ಆದರೆ ಅದಕ್ಕೆ ಕಾರಣವಾದ ಇಸ್ರೋ ಸಂಸ್ಥೆಯನ್ನು ಹುಟ್ಟು ಹಾಕಿದವರು ಯಾರು? ದೇಶದ ಬಡವರೂ ಸಹ ಆಗಸದೆತ್ತರದ ಕನಸು ಕಾಣಲು ಕಲಿಸಿಕೊಟ್ಟವರು ಯಾರು? ಅಸಂಖ್ಯ ಯುವಕರನ್ನು ಸಿಲಿಕಾನ್ ವ್ಯಾಲಿಗೆ ಕಳುಹಿಸಿದ ಐಐಟಿಗಳನ್ನು ಸ್ಥಾಪಿಸಿದವರು ಯಾರು? ಅಲ್ಲಿರುವ ಶೇ.40ರಷ್ಟು ಸ್ಟಾರ್ಟಪ್ ಕಂಪನಿಗಳು ಇಂದು ಭಾರತೀಯರ ಕೈಯಲ್ಲಿ ಇವೆ ಎಂದರೆ ಅದಕ್ಕೆ ಕಾರಣ ಯಾರು?” ಎಂದು ತರೂರ್ ಕೇಳಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ, 'ನೆಹರೂರ ಅಪರೂಪದ ಇತಿಹಾಸವನ್ನು ಕಡೆಗಣಿಸುವ ಯತ್ನಗಳು ಇಂದು ಆಳುವ ವರ್ಗದಿಂದ ನಡೆಯುತ್ತಿವೆ' ಎಂದು ಹರಿಹಾಯ್ದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos